ಜಾಗತಿಕ ಮಟ್ಟದಲ್ಲಿ ಯುಪಿಎ ಸರಕಾರ ವಿಫಲ: ಭಾಗವತ್

ಸೋಮವಾರ, 31 ಅಕ್ಟೋಬರ್ 2011 (15:55 IST)
PTI
ಕೇಂದ್ರದಲ್ಲಿ ಅಧಿಕಾರರೂಢವಾಗಿರುವ ಯುಪಿಎ ಸರಕಾರ ಚೀನಾ ದೇಶದ ಆಕ್ರಮಣಕಾರಿ ಪ್ರವೃತ್ತಿಯನ್ನು ಪರಿಣಾಮಕಾರಿಯಾಗಿ ತಡೆಯಲು ವಿಫಲವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಇಮೇಜ್ ದುರ್ಬಲವಾಗಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಚೀನಾ ದೇಶ ಭಾರತದ ನೆರೆಹೊರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಪಾಕಿಸ್ತಾನ ಮತ್ತು ಮೈನ್ಮಾರ್‌ದೊಂದಿಗೆ ಉತ್ತಮ ಮೈತ್ರಿ ಹೊಂದಿದೆ. ಇದೀಗ ಪಾಕಿಸ್ತಾನದಿಂದ ಚೀನಾಗೆ ರಸ್ತೆ ಸಂಪರ್ಕ ಕೂಡಾ ಆರಂಭಿಸಲಾಗಿದೆ ಎಂದರು.

1971ರಲ್ಲಿ ಬಾಂಗ್ಲಾದೇಶವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ್ದ ಭಾರತಕ್ಕೆ ಉತ್ತಮ ಮೈತ್ರಿ ಹೊಂದಲು ಸಾಧ್ಯವಾಗಿಲ್ಲ.ಬಾಂಗ್ಲಾದೇಶದ ವಲಸಿಗರನ್ನು ತಡೆಯುವಲ್ಲಿ ಕೂಡಾ ಯುಪಿಎ ಸರಕಾರ ವಿಫಲವಾಗಿದೆ ಎಂದು ಕಿಡಿಕಾರಿದರು.

ಕೇಂದ್ರ ಸರಕಾರಕ್ಕೆ ರಾಷ್ಟ್ರೀಯ ದೂರದೃಷ್ಟಿಯ ಕೊರತೆಯಿದೆ. ಚೀನಾದಲ್ಲಿ 1949ರಲ್ಲಿ ಅಧಿಕಾರಕ್ಕೆ ಬಂದ ಕಮ್ಯೂನಿಷ್ಟ ಸರಕಾರ, ಮುಂದಿನ 50 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ಇಸ್ರೇಲ್ ಮತ್ತು ಜಪಾನ್ ರಾಷ್ಟ್ರಗಳು ದೂರದರ್ಶಿತ್ವದಿಂದ ಪ್ರಬಲ ರಾಷ್ಟ್ರಗಳಾಗಿ ಹೊರಹೊಮ್ಮಿವೆ. ಬಾಂಗ್ಲಾದೇಶದಲ್ಲಿ ಹೆಚ್ಚಿನ ಜನನಿಬಿಡತೆ ಮತ್ತು ಕಡಿಮೆ ಭೂಮಿಯಿರುವುದರಿಂದ, ಆಸ್ಸಾಂ ರಾಜ್ಯವನ್ನು ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ದೇಶದ ಸಾಮಾನ್ಯ ಜನತೆ ಸಾಧ್ಯವಾದಷ್ಟು ಚೀನಾ ನಿರ್ಮಿತ ವಸ್ತುಗಳನ್ನು ಖರೀದಿಸುವುದನ್ನು ನಿಲ್ಲಿಸಬೇಕು. ಪ್ರಮುಖ ಎದುರಾಳಿಯಾದ ಭಾರತದ ಮಾರುಕಟ್ಟೆಯನ್ನು ಸಂಪೂರ್ಣವಾಗಿ ನಾಶಪಡಿಸಲು ಚೀನಾ ಪ್ರಯತ್ನಿಸುತ್ತಿದೆ. ಭಾರತ ಪ್ರಬಲ ರಾಷ್ಟ್ರವಾಗಬೇಕು ಎನ್ನುವ ನಾಗರಿಕ ಪ್ರಜ್ಞೆ ನಮ್ಮನ್ನು ಕಾಡಬೇಕಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರಕಾರ ಕೋಮುವಾದ ಹಿಂಸಾಚಾರ ಮಸೂದೆ ಜಾರಿಗೊಳಿಸಿ, ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರ ಮಧ್ಯೆ ಕಂದಕ ನಿರ್ಮಿಸಲು ಪ್ರಯತ್ನಿಸುತ್ತಿದೆ. ಸುಪ್ರೀಂಕೋರ್ಟ್ ನಿರ್ದೇಶನಕ್ಕೆ ವಿರೋಧವಾಗಿ ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಸಮಿತಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಆರೋಪಿಸಿದರು.

ವೆಬ್ದುನಿಯಾವನ್ನು ಓದಿ