ದೇಶದ ಆರ್ಥಿಕತೆ ಕುಸಿಯಲು ಯುಪಿಎ ನಾಯಕತ್ವವೇ ಕಾರಣ ಎಂದು ಮೋದಿ ಹೇಳಿದ್ದಕ್ಕೆ, ಇದೀಗ ತಿವಾರಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಹೊಸ ಸವಾಲು ಎಸೆದಿದ್ದಾರೆ
ಗುಜರಾತ್ನ ಆಡಳಿತ ಮಾದರಿ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಸವಾಲ್ ಹಾಕಿದೆ.
ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ ಕೇಂದ್ರ ಸಚಿವ ಮನೀಷ್ ತಿವಾರಿ, ಅಮರ್ತ್ಯ ಸೇನ್ ವಿರುದ್ಧ ಬಿಜೆಪಿ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಅದೇ ವೇಳೆ ಬಡತನದ ಪ್ರಮಾಣ ಕಡಿಮೆಯಾಗಿದೆ ಎಂದಾಗ ವಿಪಕ್ಷಗಳು ಯಾಕೆ ಕುತರ್ಕವಾಡುತ್ತಿದ್ದಾರೆ ಎಂದು ತಿವಾರಿ ಪ್ರಶ್ನಿಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿಯವರಿಗೆ ದಿನಾ ಒಂದೆರಡು ಹೇಳಿಕೆಗಳನ್ನು ನೀಡುವುದು ಅಭ್ಯಾಸವಾಗಿಬಿಟ್ಟಿದೆ. ಅವರಿಗೆ ಗುಜರಾತ್ ಸರ್ಕಾರದ ಆಡಳಿತದ ಬಗ್ಗೆಯೇ ನಂಬಿಕೆಯಿಲ್ಲ. ಆದ್ದರಿಂದ ಅವರಿಗೆ ಇಷ್ಟವಾಗುವ ದಿನ, ಸ್ಥಳದಲ್ಲಿ ಅವರು ನಮ್ಮೊಂದಿಗೆ ಮುಕ್ತ ಚರ್ಚೆಗೆ ಬರಲಿ.
ಅವರ ಸರ್ಕಾರ ಹೇಗಿದೆ ಎಂಬುದು ಇದರಲ್ಲಿ ಸ್ಪಷ್ಟವಾಗುವುದು. ದೇಶದ ಜನರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದರಲ್ಲಿನ ಸತ್ಯಾಸತ್ಯತೆ ಏನು ಎಂಬುದು ಜನರಿಗೇ ಗೊತ್ತಾಗುತ್ತೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ತಿವಾರಿ ಹೇಳಿದ್ದಾರೆ.