ದೆಹಲಿಯಲ್ಲಿ ಸರಣಿ ಸಭೆಗಳು : ತೆಲಂಗಾಣ ರಾಜ್ಯ ರಚನೆ ಖಚಿತ

ಮಂಗಳವಾರ, 30 ಜುಲೈ 2013 (12:21 IST)
PR
PR
ನವದೆಹಲಿ: ತೆಲಂಗಾಣ ಪ್ರದೇಶದ ಜನರ ಬಹುಕಾಲದ ಬೇಡಿಕೆಯಾದ ಪ್ರತ್ಯೇಕ ತೆಲಂಗಾಣ ರಾಜ್ಯ ಮಂಗಳವಾರ ರಚನೆಯಾಗುವ ಸಂಭವ ಬಹುತೇಕ ಖಚಿತವಾಗಿದೆ. ಕಾಂಗ್ರೆಸ್‌ನ ಮೂವರು ಉನ್ನತ ನಾಯಕರಾದ ಸೋನಿಯಾ ಗಾಂಧಿ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ರಾಹುಲ್ ಗಾಂಧಿ ಪ್ರಧಾನಮಂತ್ರಿಯ ರೇಸ್ ಕೋರ್ಸ್ ರಸ್ತೆಯ ನಿವಾಸದಲ್ಲಿ ಮಂಗಳವಾರ ಸಂಜೆ 4ರಿಂದ 5.30ರ ನಡುವೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ.

ಈ ಸಮಾಲೋಚನೆಗಳ ಕೊನೆಯಲ್ಲಿ, ಹೊಸ ತೆಲಂಗಾಣ ರಾಜ್ಯವನ್ನು ಪ್ರಕಟಿಸುತ್ತಾರೆಂದು ನಿರೀಕ್ಷಿಸಲಾಗಿದೆ. ಕಾಂಗ್ರೆಸ್‌ನ ಉನ್ನತ ಕಾರ್ಯಕಾರಿ ಸಮಿತಿ ಆಂಧ್ರಪ್ರದೇಶವನ್ನು ವಿಭಜಿಸುವ ನಿರ್ಧಾರಕ್ಕೆ ಅನುಮೋದನೆ ನೀಡುವ ನಿರೀಕ್ಷೆಯಿದ್ದು, ಸೋನಿಯಾ ಮತ್ತು ಪ್ರಧಾನಮಂತ್ರಿ ಯುಪಿಎ ಸರ್ಕಾರದ ಮಿತ್ರಪಕ್ಷಗಳನ್ನು ಭೇಟಿ ಮಾಡಿ, ಭಾರತದ 29ನೇ ನೂತನ ರಾಜ್ಯದ ನೀಲ ನಕ್ಷೆಯ ಬಗ್ಗೆ ಅವರಿಗೆ ಮಾಹಿತಿ ನೀಡಲಿದ್ದಾರೆ. ಆಂಧ್ರಪ್ರದೇಶದ ತೆಲಂಗಾಣ ಮತ್ತು ಕರಾವಳಿ ಆಂಧ್ರ ಮತ್ತು ರಾಯಸೀಮೆ ಪ್ರದೇಶದ ಉನ್ನತ ನಾಯಕರು ಈಗ ದೆಹಲಿಯತ್ತ ಧಾವಿಸುತ್ತಿದ್ದಾರೆ. ಆಂಧ್ರಪ್ರದೇಶ ಸಚಿವ ಸಂಪುಟದ ಬಹುತೇಕ ಸದಸ್ಯರು, ಮುಖ್ಯಮಂತ್ರಿ ಕರುಣಾಕರ ರೆಡ್ಡಿ ಆಂಧ್ರ ವಿಭಜನೆ ಕುರಿತು ಬೇಸರಗೊಂಡಿದ್ದರೂ ಪ್ರತಿಭಟನಾರ್ಥವಾಗಿ ರಾಜೀನಾಮೆ ಸಲ್ಲಿಸದಂತೆ ಮನವೊಲಿಸಲಾಗಿದೆ.

ನೂತನ ತೆಲಂಗಾಣ ರಾಜ್ಯಕ್ಕೆ ಹಸಿರು ನಿಶಾನೆ ನೀಡುವ ನಿರ್ಧಾರವನ್ನು ಸೋನಿಯಾ ಕೆಲವು ದಿನಗಳ ಹಿಂದೆ ತೆಗೆದುಕೊಂಡಿದ್ದು, ಈ ನಿರ್ಧಾರವನ್ನು ಪುನರ್ಪರಿಶೀಲನೆ ಮಾಡುವುದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಕರಾವಳಿ ಆಂಧ್ರ ಮತ್ತು ರಾಯಲಸೀಮೆಯ ಕಾಂಗ್ರೆಸ್ ನಾಯಕರು ತೆಲಂಗಾಣ ರಾಜ್ಯ ಸ್ಥಾನಮಾನಕ್ಕೆ ಆಕ್ಷೇಪಿಸಿದ್ದಾರೆ. ಈ ಪ್ರದೇಶಗಳಲ್ಲಿ ರ‌್ಯಾಲಿಗಳು ಮತ್ತು ಪ್ರತಿಭಟನೆಗಳು ನಡೆದಿದ್ದರಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕೇಂದ್ರೀಯ ಪಡೆಗಳನ್ನು ಸಜ್ಜಾಗಿ ಇರಿಸಲಾಗಿದೆ.

ವೆಬ್ದುನಿಯಾವನ್ನು ಓದಿ