ದೇವರೇ ನನ್ನನ್ನು ರಕ್ಷಿಸುತ್ತಾನೆ, ನನಗೆ ಭದ್ರತೆ ಬೇಡ: ಅರವಿಂದ್ ಕೇಜ್ರಿವಾಲ್

ಮಂಗಳವಾರ, 24 ಡಿಸೆಂಬರ್ 2013 (16:17 IST)
PTI
ದೆಹಲಿ ಮುಖ್ಯಮಂತ್ರಿ ಗದ್ದುಗೆ ಅಲಂಕರಿಸಲಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ದೇವರು ನನ್ನನ್ನು ರಕ್ಷಿಸುತ್ತಾನೆ. ನನಗೆ ಯಾವ ರೀತಿಯ ಭಧ್ರತೆ ಬೇಡ ಎಂದು ದೆಹಲಿ ಪೊಲೀಸರ ಮನವಿಯನ್ನು ತಳ್ಳಿಹಾಕಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 28 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆಪ್ ಪಕ್ಷದ ಸಂಸ್ಥಾಪಕ 44 ವರ್ಷ ವಯಸ್ಸಿನ ಅರವಿಂದ್ ಕೇಜ್ರಿವಾಲ್ ಡಿಸೆಂಬರ್ 26 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ತಮ್ಮ ಸಂಪುಟದಲ್ಲಿರುವ ಸಚಿವರು ಐಷಾರಾಮಿ ಸರಕಾರಿ ಬಂಗಲೆ ಅಥವಾ ಕೆಂಪು ದ್ವೀಪಗಳನ್ನು ಹೊಂದಿರುವ ಕಾರುಗಳನ್ನು ಬಳಸುವುದಿಲ್ಲ. ಜನಸಾಮಾನ್ಯರಂತೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಕೇಜ್ರಿವಾಲ್ ಸರಕಾರಕ್ಕೆ ಬಾಹ್ಯವಾಗಿ ಬೆಂಬಲ ನೀಡುತ್ತಿದೆ. ಬಿಜೆಪಿ ಪಕ್ಷ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಹುಮತದ ಕೊರತೆಯಿಂದಾಗಿ ಸರಕಾರ ರಚಿಸಲು ನಿರಾಕರಿಸಿತ್ತು.

ವೆಬ್ದುನಿಯಾವನ್ನು ಓದಿ