ದೇಶದ ಭವಿಷ್ಯಕ್ಕಾಗಿ ಯುಪಿಎ ಸರ್ಕಾರ ತೊಲಗಲಿ: ಮೋದಿ

ಸೋಮವಾರ, 23 ಸೆಪ್ಟಂಬರ್ 2013 (12:20 IST)
PTI
2014ರಲ್ಲಿ ನಡೆಯಲಿರುವ ಚುನಾವಣೆಯು ಯಾವುದೇ ಹುದ್ದೆಗಾಗಿ ನಡೆಯುವ ಸ್ಪರ್ಧೆಯಲ್ಲ, ಬದಲಾಗಿ 1977ರಲ್ಲಿದ್ದಂತೆ ದೇಶದ ಜನರ ಧ್ವನಿ ಹಾಗೂ ಕನಸಿನ ಪ್ರತಿಬಿಂಬವಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಆಡಳಿತ ಅವಧಿಯಲ್ಲಿ ದೇಶ ಅಧೋಗತಿಗಿಳಿದಿದೆ. ದೇಶದ ಭವಿಷ್ಯಕ್ಕಾಗಿ ಈ ಸರ್ಕಾರ ತೊಲಗಬೇಕಿದೆ. ಅದು ಪ್ರಜಾಪ್ರಭುತ್ವ ರೀತಿಯಲ್ಲೇ ಆಗಲಿ ಎಂದು ಮೋದಿ ಹೇಳಿದರು. ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅಮೆರಿಕದ ಟಾಂಪಾದಲ್ಲಿರುವ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಬಲಿಷ್ಠ ಪಟ್ಟಭದ್ರ ಹಿತಾಸಕ್ತಿಗಳು ರಕ್ಷಣೆ ನೀಡುತ್ತಿವೆ. ನಾವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಹೋರಾಟ ನಡೆಸಬೇಕಿದೆ ಎಂದ ಅವರು, ಕಳೆದ ಒಂಬತ್ತು ವರ್ಷಗಳಿಂದ ಯುಪಿಎ ಸರ್ಕಾರ ಆಡಳಿತದಲ್ಲಿದೆ. ಆದರೆ, ಈ ಒಂಬತ್ತು ವರ್ಷಗಳ ಸಾಧನಾ ವರದಿ ನೀಡುವ ಧೈರ್ಯ ಇಲ್ಲ ಎಂದು ಹೇಳಿದರು.

ವಾಜಪೇಯಿ ಸರ್ಕಾರ ಅಧಿಕಾರದಲ್ಲಿದ್ದಾಗ 21ನೇ ಶತಮಾನವು ಭಾರತದ ಶತಮಾನ ಎನ್ನುವ ಭಾವನೆ ಇತ್ತು. ಆದರೆ, ವಾಜಪೇಯಿ ಸರ್ಕಾರದ ಬಳಿಕ ಈ ಕನಸು ನುಚ್ಚುನೂರಾಯಿತು. ದೇಶ ಅಭಿವೃದ್ಧಿಯಲ್ಲಿ ಹಿಂದುಳಿಯಿತು. ಸದ್ಯದ ಬಿಕ್ಕಟ್ಟಿನಿಂದ ದೇಶವನ್ನು ಬಿಜೆಪಿಯಿಂದಷ್ಟೇ ರಕ್ಷಿಸಲು ಸಾಧ್ಯ ಎಂದರು. ಬಿಜೆಪಿ ಮುಖಂಡ ಆಡ್ವಾಣಿ, ಮಧ್ಯಪ್ರದೇಶ ಗೋವಾ, ಹಿಮಾಚಲ ಪ್ರದೇಶ ಕರ್ನಾಟಕದಲ್ಲೂ ಬಿಜೆಪಿ ಉತ್ತಮ ಆಡಳಿತ ನೀಡಿದೆ ಎಂದರು.

ವೆಬ್ದುನಿಯಾವನ್ನು ಓದಿ