ನಕಲಿ ಚಿನ್ನದ ಪದಕ:ರೈತನಿಗೆ ಆಘಾತ

ಸೋಮವಾರ, 17 ಸೆಪ್ಟಂಬರ್ 2007 (14:34 IST)
ಮಹಾರಾಷ್ಟ್ರ ಸರ್ಕಾರ ತನಗೆ ನೀಡಿದ ಚಿನ್ನದ ಪದಕ ಕಳಪೆ ಗುಣಮಟ್ಟದ ಬೆಳ್ಳಿಯಿಂದ ತಯಾರಿಸಿದ್ದು, ಅದಕ್ಕೆ ಚಿನ್ನದ ಮೆರುಗು ನೀಡಲಾಗಿದೆ ಎಂದು ಗೊತ್ತಾದ ಕೂಡಲೇ ರೈತನೊಬ್ಬ ಆಘತಕ್ಕೊಳಗಾಗಿದ್ದಾನೆ.

ಚಂದ್ರಾಪುರ ಜಿಲ್ಲೆಯ ನಾಂದೇಡ್ ಗ್ರಾಮದಲ್ಲಿ ಬತ್ತಬೆಳೆಯುವ ರೈತ ದಾದಾಜಿ ಖೋಬ್ರಾಗಡೆ ಹೊಸ ತಳಿಯ ಎಚ್‌ಎಂಟಿ ಭತ್ತ ಅಭಿವೃದ್ಧಿಪಡಿಸಿದ್ದಕ್ಕಾಗಿ ಕೃಷಿ ಭೂಷಣ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ರೈತನ ಸಾಧನೆ ಪುರಸ್ಕರಿಸಿ ಮುಂಬೈನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಮಹಾರಾಷ್ಟ್ರ ರಾಜ್ಯಪಾಲರು ರೈತನಿಗೆ 50 ಗ್ರಾಂ ತೂಕದ 14 ಕ್ಯಾರೆಟ್ ಚಿನ್ನದ ಪದಕ, 25,000 ರೂ. ನಗದು ಹಣ ಮತ್ತು ಪ್ರಶಸ್ತಿಪತ್ರ ನೀಡಿ ಪುರಸ್ಕರಿಸಿದ್ದರು.

ಆರ್ಥಿಕ ಸಮಸ್ಯೆಗಳಿಗೆ ತುತ್ತಾಗಿದ್ದ ಖೋಬ್ರಾಗಢೆ ತನ್ನ ಪದಕವನ್ನು ಮಾರಲು ನಿರ್ಧರಿಸಿದ. ಆದರೆ ಪದಕವು ನಕಲಿಯಾಗಿದ್ದು, ಚಿನ್ನದ ಮೆರಗು ನೀಡಿ ಕಳಪೆ ಬೆಳ್ಳಿಯಿಂದ ತಯಾರಿಸಲಾಗಿದೆ ಎಂದು ಸ್ಥಳೀಯ ಆಭರಣವ್ಯಾಪಾರಿಯು ಮಾಹಿತಿ ನೀಡಿದಾಗ ರೈತನಿಗೆ ದಿಗ್ಭ್ರಮೆಯಾಯಿತು.

ಏತನ್ಮಧ್ಯೆ, ಈ ಬಗ್ಗೆ ತನಿಖೆಗೆ ಒತ್ತಾಯಿಸಿರುವ ಭಾರಿಪ್ ಬಹುಜನ್ ಮಹಾಸಂಘ, ವಂಚನೆ ಎಸಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

ವೆಬ್ದುನಿಯಾವನ್ನು ಓದಿ