ನರೇಂದ್ರ ಮೋದಿ ಶ್ರೀರಾಮನ ಅವತಾರ: ಬಿಜೆಪಿ

ಬುಧವಾರ, 30 ನವೆಂಬರ್ 2011 (16:39 IST)
PTI
ಮುಖ್ಯಮಂತ್ರಿ ನರೇಂದ್ರ ಮೋದಿ ಸಮಾಜದ ಏಕತೆ, ಸೌಹಾರ್ದತೆಯನ್ನು ಹೆಚ್ಚಿಸಲು ಸದ್ಭಾವನಾ ನಿರಶನವನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇಂತಹ ನಿರಶನಗಳಲ್ಲಿ ಬಿಜೆಪಿ ನಾಯಕರು ನರೇಂದ್ರ ಮೋದಿ ಧರೆಗಿಳಿದ ಶ್ರೀರಾಮನ ಅವತಾರ ಎಂದು ಹೊಗಳಿದ್ದಾರೆ.

ಆಹುವಾ ಜಿಲ್ಲೆಯಲ್ಲಿ ನರೇಂದ್ರ ಮೋದಿ ಸದ್ಭಾವನಾ ನಿರಶನ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಬಿಜೆಪಿ ನಾಯಕರು ಮಾತನಾಡಿ, ನರೇಂದ್ರ ಮೋದಿ ಧರೆಗಿಳಿದ ಶ್ರೀರಾಮನ ಅವತಾರವಾಗಿದ್ದಾರೆ. ಅವರು ಮನುಷ್ಯರಲ್ಲ ದೇವರು ಎಂದು ಬಣ್ಣಿಸಿದ್ದಾರೆ.

ಬರದ ರಾಜ್ಯವಾಗಿದ್ದ ಗುಜರಾತ್‌ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ, ಅಗತ್ಯಕ್ಕಿಂತ ಹೆಚ್ಚಿನ ಮಳೆಯಾಗುತ್ತಿದೆ. ಗುಜರಾತ್ ರಾಜ್ಯ ಹಸಿರು ಕ್ರಾಂತಿಯಾಗಲು ಶ್ರೀರಾಮನ ಅವತಾರದಲ್ಲಿರುವ ಮೋದಿ ಕಾರಣವಾಗಿದ್ದಾರೆ ಎಂದು ಬಿಜೆಪಿ ನಾಯಕರು ಹೊಗಳಿ ಅಟ್ಟಕ್ಕೇರಿಸಿದ್ದಾರೆ.

ಮತ್ತೊಬ್ಬ ಬಿಜೆಪಿ ನಾಯಕ ಸೋನು ಆಹಿರೆ ಮಾತನಾಡಿ, ಮುಖ್ಯಮಂತ್ರಿ ನರೇಂದ್ರ ಮೋದಿ 'ಸಂತ'ರಾಗಿದ್ದು, ರಾಜ್ಯದ ಜನತೆಯ ಬದುಕಿಗೆ ಹೊಸ ಬೆಳಕನ್ನು ತಂದಿದ್ದಾರೆ. ಮೋದಿಯವರ ಆಗಮನದಿಂದ ಜಿಲ್ಲಿಯೇ ಪುನೀತವಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿಯ ರಾಜ್ಯಸಭಾ ಸದಸ್ಯರಾದ ಭರತ್ ಸಿನ್ಹಾ ಪರ್ಮಾರ್ ಮಾತನಾಡಿ, ಮುಖ್ಯಮಂತ್ರಿ ನರೇಂದ್ರ ಮೋದಿ ರಾಕ್ಷಸರನ್ನು ನಿರ್ನಾಮ ಮಾಡಲು ಧರೆಗೆ ಬಂದಿದ್ದಾರೆ. ಕಾಂಗ್ರೆಸ್ ನಾಯಕರು ಅನೇಕ ಆರೋಪಗಳನ್ನು ಮಾಡಿದ್ದರೂ ಔಟಾಗದ ಬ್ಯಾಟ್ಸ್‌ಮೆನ್‌ನಂತೆ ಮೋದಿ ಬ್ಯಾಟ್ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ವೆಬ್ದುನಿಯಾವನ್ನು ಓದಿ