ನರೇಂದ್ರ ಮೋದಿ ಹಿಮಾಲಯದಂತೆ, ರಾಹುಲ್ ಗಾಂಧಿ ಸಣ್ಣ ಇರುವೆಯಂತೆ: ಬಾಬಾ ರಾಮದೇವ್

ಶುಕ್ರವಾರ, 22 ನವೆಂಬರ್ 2013 (19:24 IST)
PTI
ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಅಪಾಯಕಾರಿಯಾಗಿದ್ದಾರೆ. ನರೇಂದ್ರ ಮೋದಿ ಹಿಮಾಲಯವಾದ್ರೆ ರಾಹುಲ್ ಗಾಂಧಿ ಸಣ್ಣ ಇರುವೆಯಂತೆ ಎಂದು ಯೋಗ ಗುರು ಬಾಬಾ ರಾಮದೇವ್ ಲೇವಡಿ ಮಾಡಿದ್ದಾರೆ.

ಉತ್ತರಾಖಂಡ್ ಸರಕಾರದ ವಿರುದ್ಧ ತಿರುಗಿಬಿದ್ದಿರುವ ಯೋಗ ಗುರು ಬಾಬಾ ರಾಮದೇವ್, ತಮ್ಮ ವಿರುದ್ಧ ದಾಖಲಿಸಲಾದ 81 ಪ್ರಕರಣಗಳು ಆಧಾರರಹಿತವಾಗಿದ್ದು ಕಾಂಗ್ರೆಸ್‌ನ ರಾಜಕೀಯ ಸೇಡಿನ ಕ್ರಮವಾಗಿದೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಪಕ್ಷ ಬಾಬಾ ರಾಮದೇವ್ ಅವರನ್ನು ಅಪರಾಧಿ ಮತ್ತು ಭಯೋತ್ಪಾದಕನಂತೆ ವರ್ತಿಸುತ್ತಿದೆ. ಕಾಂಗ್ರೆಸ್ ವಿರುದ್ಧ ಹೇಳಿಕೆಗಳನ್ನು ನೀಡಿದ್ದರಿಂದ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಉತ್ತರಾಖಂಡ ಮುಖ್ಯಮಂತ್ರಿ ವಿಜಯ್ ಬಹುಗುಣ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನನ್ನೊಂದಿಗೆ ಜಂಟಿ ಸುದ್ದಿಗೋಷ್ಛಿಯಲ್ಲಿ ಪಾಲ್ಗೊಳ್ಳಲಿ. ನನ್ನ ಎಲ್ಲಾ ಆರೋಪಗಳಿಗೆ ತಕ್ಕ ಉತ್ತರ ನೀಡಲು ಸಿದ್ದವಾಗಿದ್ದೇನೆ. ಆದರೆ ದಯವಿಟ್ಟು ಸುಳ್ಳು ಹೇಳಬೇಡಿ ಎಂದು ಕಾಂಗ್ರೆಸ್ ಮುಖಂಡರಲ್ಲಿ ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಭ್ರಷ್ಟಾಚಾರದ ವಿಶ್ವದಾಖಲೆಗಳನ್ನೇ ಮುರಿದುಹಾಕಿದೆ. ಮುಖ್ಯಮಂತ್ರಿ ವಿಜಯ್ ಬಹುಗುಣ್ ಸಾಧುವಿನ ವಿರುದ್ಧ 81 ಪ್ರಕರಣಗಳನ್ನು ದಾಖಲಿಸಿ ಹೊಸ ದಾಖಲೆ ಬರೆದಿದ್ದಾರೆ ಎಂದು ರಾಮದೇವ್ ಟೀಕಿಸಿದ್ದಾರೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು ಹೊಗಳಿದ ಬಾಬಾ ರಾಮದೇವ್, ಕಾಂಗ್ರೆಸ್ ಪಕ್ಷ ಆರು ತಿಂಗಳಲ್ಲಿ ಯುಪಿಎ ಸರಕಾರ ನಾಶವಾಗಿ ಹೊಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ