ದೇಶದ ಮುಂದಿನ ಪ್ರಧಾನಮಂತ್ರಿ ಸ್ಥಾನವನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅಲಂಕರಿಸಲಿ. ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ಸಹಿಸುವುದಿಲ್ಲ ಎಂದು ಬಿಹಾರ್ ರಾಜ್ಯದ ಬಿಜೆಪಿ ಶಾಸಕ ರಾಣಾ ಗಂಗೇಶ್ವರ್ ಸಿಂಗ್ ಹೇಳಿದ್ದಾರೆ.
ಸಮಸ್ಠಿಪುರ್ ಜಿಲ್ಲೆಯ ಮೊಹಿದ್ದಿನಗರ್ ಕ್ಷೇತ್ರದ ಬಿಜೆಪಿ ಶಾಸಕ ಗಂಗೇಶ್ವರ್ ಸಿಂಗ್ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನತೆ ಜೆಡಿಯು ಪಕ್ಷಕ್ಕೆ ಮತಹಾಕಿದಲ್ಲಿ 40 ಲೋಕಸಭಾ ಕ್ಷೇತ್ರಗಳಲ್ಲಿ 30 ಸ್ಥಾನಗಳಲ್ಲಿ ಜೆಡಿಯು ಜಯಗಳಿಸಲಿದೆ ಎಂದರು.
ಬಿಹಾರ್ ರಾಜ್ಯದಲ್ಲಿ ಒಂದು ವೇಳೆ ಜೆಡಿಯು 30 ಲೋಕಸಭಾ ಸ್ಥಾನಗಳಿಸಿದಲ್ಲಿ ನಿತೀಶ್ ಕುಮಾರ್ ಪ್ರಧಾನಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ. ನಿತೀಶ್ ಪ್ರಧಾನಿಯಾಗುವುದು ರಾಜ್ಯಕ್ಕೆ ಪ್ರತಿಷ್ಠೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.
ಪಕ್ಷದಿಂದ ಉಚ್ಚಾಟನೆಗೊಂಡ ಬಿಜೆಪಿ ಶಾಸಕರಾದ ಗಂಗೇಶ್ವರ್ ಸಿಂಗ್ ಮತ್ತು ವಿಜಯ್ ಕುಮಾರ್ ಮಿಶ್ರಾ ಮತ್ತು ಅಮರ್ನಾಥ್ ಗಮಿ, ಬಿಜೆಪಿ ಪಕ್ಷದಲ್ಲಿ ಅಂತರಿಕ ಪ್ರಜಾಪ್ರಭುತ್ವದ ಕೊರತೆಯಿದೆ ಎಂದು ಆರೋಪಿಸಿದ್ದಾರೆ.