ರೈತರ ಸ್ಥಿತಿ ಸುಧಾರಣೆಗೆ ಕ್ರಮ: ಪ್ರಧಾನಿ

ಶನಿವಾರ, 17 ನವೆಂಬರ್ 2007 (18:43 IST)
PTI
ರೈತರ ಸ್ಥಿತಿಗತಿ ಸುಧಾರಣೆಗೆ ಸರ್ಕಾರ ಶೀಘ್ರದಲ್ಲೇ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಧಾನಮಂತ್ರಿ ಮನಮೋಹನ ಸಿಂಗ್ ಶನಿವಾರ ತಿಳಿಸಿ, ಒಂದು ದಶಕದೊಳಗೆ ಭಾರತದ ಬಡತನದ ದರವನ್ನು ಒಂದಂಕಿಗೆ ಇಳಿಸುವ ಭರವಸೆಯನ್ನು ನೀಡಿದರು. ಮುಂಬರುವ ವಾರಗಳಲ್ಲಿ ರೈತರ ಪರಿಸ್ಥಿತಿ ಸುಧಾರಣೆಗೆ ಇನ್ನಷ್ಟು ಕ್ರಮಗಳ್ನು ಕೈಗೊಳ್ಳುವ ಯೋಜನೆ ಹೊಂದಿದ್ದೇವೆ ಎಂದು ಸಿಂಗ್ ಹೇಳಿದರು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧಿವೇಶನ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು,

ಕಳೆದ ಮೂರು ವರ್ಷಗಳಲ್ಲಿ ರಾಷ್ಟ್ರ ಶೇ. 4ರಷ್ಟು ಸರಾಸರಿ ಕೃಷಿ ಪ್ರಗತಿ ದರವನ್ನು ದೀರ್ಘ ಕಾಲದ ಅಂತರದ ಬಳಿಕ ಸಾಧಿಸಿದೆ. ಭವಿಷ್ಯದಲ್ಲಿ ಪ್ರಗತಿ ದರವನ್ನು ಕಾಯ್ದುಕೊಳ್ಳುವುದು ಸರ್ಕಾರದ ಗುರಿಯಾಗಿದೆ ಎಂದು ಅವರು ನುಡಿದರು. ಒಟ್ಟಾರೆ ಆರ್ಥಿಕ ದರವು ಕಳೆದ ಮೂರು ವರ್ಷಗಳಲ್ಲಿ ಸರಾಸರಿ ಶೇ.9ನ್ನು ಮುಟ್ಟಿದೆ.

ಬೆಳವಣಿಗೆ ಹಾದಿಯಲ್ಲಿ ನಾವು ರಾಷ್ಟ್ರವನ್ನು ಮುಂದುವರಿಸಿದರೆ ಬಡತನದ ದರವನ್ನು ಮುಂದಿನ ದಶಕದೊಳಗೆ ಒಂದಂಕಿಗೆ ಇಳಿಸಲು ಸಾಧ್ಯವಾಗಬಹುದು ಎಂದು ಪ್ರಧಾನಿ ಭರವಸೆ ವ್ಯಕ್ತಪಡಿಸಿದರು. 11ನೆ ಯೋಜನೆಯಲ್ಲಿ ಬಡತನವನ್ನು ಶೇ.28ರಿಂದ ಶೇ.18ಕ್ಕೆ ಇಳಿಸುವ ಗುರಿ ಹೊಂದಲಾಗಿದೆ.

ಪ್ರಸಕ್ತ ರಾಷ್ಟ್ರದಲ್ಲಿ 28 ಕೋಟಿ ಜನರು ಕಡುಬಡವರಿದ್ದಾರೆ. ಅಗತ್ಯ ಪದಾರ್ಥಗಳ ಬೆಲೆ ಹೆಚ್ಚುತ್ತಿರುವ ಬಗ್ಗೆ ಪಕ್ಷದ ಕಾರ್ಯಕರ್ತರ ಕಳವಳಕ್ಕೆ ಸ್ಪಂದಿಸಿದ ಅವರು, ಕಚ್ಚಾ ತೈಲದ ಬೆಲೆ ಏರಿಕೆ ಮುಂತಾದ ಜಾಗತಿಕ ಅಂಶಗಳ ಬಗ್ಗೆ ಸರ್ಕಾರದ ನಿಯಂತ್ರಣ ಕಡಿಮೆಯೆಂದು ಹೇಳಿದರು.

ವೆಬ್ದುನಿಯಾವನ್ನು ಓದಿ