ಲೋಕಸಭೆಗೆ ಮಧ್ಯಂತರ ಚುನಾವಣೆ ಸಾಧ್ಯತೆ: ಪವಾರ್

ಸೋಮವಾರ, 29 ಏಪ್ರಿಲ್ 2013 (14:48 IST)
PTI
ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರು ಪ್ರಸ್ತುತ ರಾಜಕೀಯ ಬೆಳವಣಿಗೆಯನ್ನು ಗಮನಿಸಿ ಚುನಾವಣೆಗೆ ಸಜ್ಜಾಗುವಂತೆ ಪಕ್ಷದ ಮುಖಂಡರಿಗೆ ಸೂಚಿಸಿದ್ದಾರೆ.

ಕೇಂದ್ರ ಸರಕಾರವು ಪ್ರಸ್ತುತ ಅನ್ಯ ಪಕ್ಷಗಳ ಬೆಂಬಲದೊಂದಿಗೆ ನಡೆಯುತ್ತಿದ್ದು, ಯಾವ ಸಂದರ್ಭದಲ್ಲೂ ಸರಕಾರ ಬೀಳಬಹುದು. ಆದ್ದರಿಂದ ಚುನಾವಣೆಗೆ ಸಜ್ಜಾಗಬೇಕಿದೆ ಎಂದು ಕೇಂದ್ರ ಕೃಷಿ ಸಚಿವ ಶರಾದ್‌ ಪವಾರ್‌ ಅವರು ತಿಳಿಸಿದ್ದಾರೆ. ಕಳೆದ ಎರಡು ದಿನಗಳಿಂದ ಎನ್‌ಸಿಪಿ ರಾಜ್ಯ ಶಾಸಕರ ಸಭೆ ನಡೆಯುತ್ತಿದ್ದು, ಶನಿವಾರ ನರಿಮನ್‌ಪಾಯಿಂಟ್‌ನ ರಾಷ್ಟ್ರವಾದಿ ಭವನದಲ್ಲಿ ಸಭೆಯು ಸಂಪನ್ನಗೊಂಡಿತು.

ಸಭೆಯಲ್ಲಿ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌, ಸಚಿವ ಛಗನ್‌ ಭುಜಬಲ್‌, ಗ್ರಾಮೀಣ ವಿಕಾಸ ಸಚಿವ ಜಯಂತ್‌ ಪಾಟೀಲ್‌, ನೀರಾವತಿ ಸಚಿವ ಸುನಿಲ್‌ ತಟ್ಕರೆ ಅವರು ಸೇರಿದಂತೆ ಪಕ್ಷದ ಪ್ರಮುಖ ಮಂತ್ರಿಗಳು, ಸಂಸದರು, ಪಕ್ಷದ ಪದಾಧಿಕಾರಿಗಳು, ಶಾಸಕರು ಉಪಸ್ಥಿತರಿದ್ದರು.

ಪ್ರಸ್ತುತ ಪರಿಸ್ಥಿಯನ್ನು ಕಂಡಾಗ ದೇಶದಲ್ಲಿ ಲೋಕಸಭೆಯ ಚುನಾವಣೆಯು ಯಾವ ಸಂದರ್ಭದಲ್ಲೂ ಬರಬಹುದು ಎಂದು ಶರದ್‌ ಪವಾರ್‌ ಸಭೆಯಲ್ಲಿ ತಿಳಿಸಿದರು. ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶರದ್‌ ಪವಾರ್‌ ಅವರು 22 ಮಂದಿ ಸಂಸದರು ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರು, ಶಾಸಕರೊಂದಿಗೆ ಸಮಾಲೋಚನೆ ನಡೆಸಿದರು.

ವೆಬ್ದುನಿಯಾವನ್ನು ಓದಿ