ವಿವಾದಾತ್ಮಕ ಪಿಎಫ್‌ ಸುತ್ತೋಲೆಗೆ ಖರ್ಗೆ ತಡೆ

PTI
ಭತ್ಯೆಗಳನ್ನೆಲ್ಲಾ ಮೂಲ ವೇತನಕ್ಕೆ ಸೇರಿಸಿ ಅದರ ಆಧಾರದ ಮೇಲೆ ನೌಕರರ ಭವಿಷ್ಯ ನಿಧಿ (ಪಿ.ಎಫ್.) ನಿರ್ಧರಿಸುವ ವಿವಾದಾತ್ಮಕ ಸುತ್ತೋಲೆಗೆ ಕೇಂದ್ರ ಕಾರ್ಮಿಕ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ ತಡೆಯೊಡ್ಡಿದ್ದಾರೆ. ಈ ಮೂಲಕ, ಬರುತ್ತಿರುವ ಸಂಬಳ ಕಡಮೆಯಾಗಲಿದೆ ಎಂಬ ಆತಂಕದಲ್ಲಿದ್ದ ಕೋಟ್ಯಂತರ ನೌಕರರು ನಿರಾಳರಾಗುವಂತಾಗಿದೆ.

ನ.30ರಂದು ನೌಕರರ ಭವಿಷ್ಯ ನಿಧಿ ಮಂಡಳಿ ಹೊರಡಿಸಿದ್ದ ಸುತ್ತೋಲೆ ಬಗ್ಗೆ ಹಲವು ಪ್ರಶ್ನೆಗಳು ಹಾಗೂ ಗೊಂದಲಗಳು ಎದ್ದ ಹಿನ್ನೆಲೆಯಲ್ಲಿ ಆ ಸುತ್ತೋಲೆಯನ್ನು ತಡೆಹಿಡಿಯಲಾಗಿದೆ. ಹೀಗಾಗಿ ಮುಂದಿನ ಆದೇಶದವರೆಗೆ ಯಥಾಸ್ಥಿತಿಯೇ ಮುಂದುವರಿಯಲಿದೆ ಎಂದು ಖರ್ಗೆ ಅವರು ತಿಳಿಸಿದ್ದಾರೆ.

ನೌಕರರ ಮೂಲ ವೇತನದಲ್ಲಿ ಶೇ.12ರಷ್ಟು ಭವಿಷ್ಯ ನಿಧಿಗೆ ಹೋಗುತ್ತದೆ. ಅಷ್ಟೇ ಮೊತ್ತವನ್ನು ಕಂಪನಿಗಳೂ ಪಾವತಿಸುತ್ತವೆ. ಮೂಲವೇತನ ಹೆಚ್ಚಾದಂತೆ ಕಂಪನಿಗಳೂ ಭವಿಷ್ಯ ನಿಧಿಗೆ ಹೆಚ್ಚು ಕೊಡುಗೆ ನೀಡಬೇಕಾಗುತ್ತದೆ. ಇದನ್ನು ಕಡಮೆಗೊಳಿಸುವ ಸಲುವಾಗಿ ಕಂಪನಿಗಳು ಭತ್ಯೆಗಳನ್ನು ನೀಡುವ ಮೂಲಕ ಮೂಲವೇತನವನ್ನು ಒಂದೇ ಪ್ರಮಾಣದಲ್ಲಿ ಇಟ್ಟುಕೊಳ್ಳುತ್ತಿದ್ದವು. ಆದರೆ ಎಲ್ಲ ಭತ್ಯೆಗಳನ್ನೂ ಮೂಲವೇತನದಲ್ಲಿ ಸೇರಿಸಿ ಅದರ ಆಧಾರದ ಮೇಲೆ ಭವಿಷ್ಯ ನಿಧಿ ಲೆಕ್ಕ ಹಾಕಬೇಕು ಎಂದು ನ.30ರಂದು ನಿವೃತ್ತರಾದ ಭವಿಷ್ಯ ನಿಧಿ ಮುಖ್ಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಭತ್ಯೆಗಳೆಲ್ಲಾ ಮೂಲವೇತನಕ್ಕೆ ಸೇರುವುದರಿಂದ ನೌಕರರಿಗೆ ಭವಿಷ್ಯದಲ್ಲಿ ಅನುಕೂಲವಾಗುತ್ತಿತ್ತು. ಆದರೆ, ಮೂಲವೇತನದಲ್ಲೂ ಭವಿಷ್ಯ ನಿಧಿಗೆ ಹಣ ಕಡಿತವಾಗುವುದರಿಂದ ಮನೆಗೆ ಒಯ್ಯುವ ಸಂಬಳದ ಮೊತ್ತ ಕಡಮೆಯಾಗುತ್ತಿತ್ತು.

ವೆಬ್ದುನಿಯಾವನ್ನು ಓದಿ