ಸಲ್ಮಾನ್ ಗುದ್ದೋಡು ಪ್ರಕರಣ; ಸಂಬಂಧಿಸಿದ ಕಡತಗಳು ಭಸ್ಮ

ಗುರುವಾರ, 28 ಮೇ 2015 (13:14 IST)
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರ ಎಷ್ಟು ಖರ್ಚು ಮಾಡಿದೆ ಎಂಬ ದಾಖಲೆ ಯಾರ ಬಳಿಯೂ ಇಲ್ಲವಂತೆ.

ಮಹಾರಾಷ್ಟ್ರ ಸರಕಾರದ ಗೃಹ, ಕಾನೂನು & ನ್ಯಾಯಾಂಗ ಇಲಾಖೆಗಳು ಸಪ್ಟೆಂಬರ್ 28, 2002 ರ ಸಲ್ಮಾನ್ ಖಾನ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ನಾವು ಹೊಂದಿಲ್ಲ ಎಂದು ಸ್ಪಷ್ಟಪಡಿಸಿವೆ.
 
ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಈ ಕುರಿತು ವಿವರಣೆ ಕೇಳಿ ಸಲ್ಲಿಸಿದ ಅರ್ಜಿಯಿಂದಾಗಿ ಈ ವಿಚಾರ ಬಹಿರಂಗಗೊಂಡಿದೆ.
 
ಮನ್ಸೂರ್ ದರ್ವೇಶ್ ಎಂಬ ಮಾಹಿತಿ ಹಕ್ಕು ಕಾರ್ಯಕರ್ತ ತಾವು ಸಲ್ಮಾನ್ ಖಾನ್ ಮಾಡಿದ್ದಾರೆ ಎನ್ನಲಾದ ಅಪಘಾತಕ್ಕೆ ಸಂಬಂಧಿಸಿದಂತೆ ಎಷ್ಟು ಹಣ ಖರ್ಚು ಮಾಡಲಾಗಿದೆ? ಎಂದು ಮಹಾರಾಷ್ಟ್ರ ಸರಕಾರಕ್ಕೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ್ದರು.  ಅದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇಲ್ಲ. ದಕ್ಷಿಣ ಮುಂಬೈನಲ್ಲಿರುವ ಸರಕಾರದ ಪ್ರಧಾನ ಕಚೇರಿಯಲ್ಲಿ ಜೂನ್ 21, 2012ರಲ್ಲಿ ಸಂಭವಿಸಿದ ವಿನಾಶಕಾರಿ ಬೆಂಕಿ ಅನಾಹುತದಲ್ಲಿ ಅವು ಸುಟ್ಟು ಭಸ್ಮವಾಗಿವೆ ಎಂದು ಸರಕಾರ ಅದಕ್ಕುತ್ತರಿಸಿದೆ. 
 
2002ರ ಅಕ್ಟೋಬರ್ 29ರಂದು ನಟ ಸಲ್ಮಾನ್ ಖಾನ್ ಅವರು ಚಲಿಸುತ್ತಿದ್ದ ಕಾರು ಫುಟ್‌ಪಾತ್‌ನಲ್ಲಿ ಮಲಗಿದ್ದ ಪಾದಚಾರಿಗಳ ಮೇಲೆ ಹರಿದ ಪರಿಣಾಮ ಓರ್ವ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ 304/2ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸತತವಾಗಿ ಹನ್ನೆರಡೂವರೆ ವರ್ಷಗಳ ಕಾಲ ವಿಚಾರಣೆ ನಡೆದಿತ್ತು. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೇ 5ರಂದು ಇಲ್ಲಿನ ಕೆಳ ಹಂತದ ನ್ಯಾಯಾಲಯವು ಆರೋಪಿ ಸಲ್ಮಾನ್ ಖಾನ್ ಅವರಿಗೆ 5 ವರ್ಷಗಳ ಕಾಲ ಜೈಲುಶಿಕ್ಷೆ ಹಾಗೂ 25 ಸಾವಿರ ರೂ. ದಂಡವನ್ನು ವಿಧಿಸಿ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಜಾಮೀನು ಅರ್ಜಿಯ ಮೊರೆ ಹೋಗಿದ್ದ ಸಲ್ಮಾನ್ ಖಾನ್ ಅವರಿಗೆ ಮೇ 8 ರಂದು ಮುಂಬೈ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. 

ವೆಬ್ದುನಿಯಾವನ್ನು ಓದಿ