2011-12 ಹೊರೆಯಿಲ್ಲದ ಕೇಂದ್ರ ಬಜೆಟ್- ಮುಖ್ಯಾಂಶಗಳು ಇಲ್ಲಿವೆ
ಶುಕ್ರವಾರ, 16 ಮಾರ್ಚ್ 2012 (09:28 IST)
PR
ಕೃಷಿಗೆ ಬಂಪರ್ ಕೊಡುಗೆ, ರೈತರ ಸಾಲ ಮಿತಿ ಹೆಚ್ಚಳ, ಆದಾಯ ತೆರಿಗೆ ಮಿತಿಯನ್ನು 1.8 ಲಕ್ಷಕ್ಕೆ ಹೆಚ್ಚು ಮಾಡಿರುವುದು, ಬೆಂಗಳೂರು ಮೆಟ್ರೋ ಅನುದಾನ ಏರಿಕೆ, ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು ದುಪ್ಪಟ್ಟು ಮಾಡಿರುವುದು, ವೃದ್ಧಾಪ್ಯ ವೇತನ ಮಿತಿಯನ್ನು ಇಳಿಕೆ ಮಾಡಿರುವುದು ಸೇರಿದಂತೆ ಹತ್ತು ಹಲವು ಏರಿಕೆ-ಇಳಿಕೆ, ಲಾಭ-ನಷ್ಟಗಳನ್ನು ಒಳಗೊಂಡಿರುವ 2011-12ನೇ ಸಾಲಿನ ಹಣಕಾಸು ಮುಂಗಡ ಪತ್ರವನ್ನು ವಿತ್ತ ಸಚಿವ ಪ್ರಣಬ್ ಮುಖರ್ಜಿಯವರು ಇಂದು ಸಂಸತ್ತಿನಲ್ಲಿ ಮಂಡಿಸಿದರು.
ಹಲವು ಕಡೆ ಅಧಿಕಾರಕ್ಕೆ ಬರಬೇಕೆನ್ನುವ ಅಭಿಲಾಷೆಯನ್ನು ಬಿಂಬಿಸುವ ಅತ್ಯಮೂಲ್ಯ ಅವಕಾಶವನ್ನು ಪಡೆದಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಕೃಷಿಕರ ಒಲವು ಗಿಟ್ಟಿಸುವುದಕ್ಕೆ ಸರ್ಕಸ್ ಮಾಡಿರುವುದು ಸ್ಪಷ್ಟ. ಬೆಲೆಯೇರಿಕೆಯಿಂದ ತತ್ತರಿಸಿರುವ ಮಧ್ಯಮ ವರ್ಗದವರಿಗೆ ಹೊರೆಯಾಗುವ ಹಲವು ತೆರಿಗೆಗಳನ್ನು ಕಡಿಮೆ ಮಾಡುವ ಪ್ರಸ್ತಾಪವನ್ನು ಮುಖರ್ಜಿ ಮಾಡಿದ್ದಾರೆ.
ಮುಖರ್ಜಿಯವರು ಮಂಡಿಸಿರುವ ಆಯವ್ಯಯ ಪಟ್ಟಿಯಲ್ಲಿನ ಪ್ರಮುಖ ಅಂಶಗಳನ್ನು ಕೆಳಗೆ ನೀಡಲಾಗಿದೆ.
ಮೂಲಭೂತ ಸೌಕರ್ಯ... * ಏಳು ಮೆಗಾ ಚರ್ಮೋದ್ಯಮ ವಲಯ ನಿರ್ಮಾಣಕ್ಕೆ ಯೋಜನೆ * 107 ಶೈತ್ಯಾಗಾರಗಳ ನಿರ್ಮಾಣ * ಭಾರತ ನಿರ್ಮಾಣ ಯೋಜನೆಗಳಿಗಾಗಿ 58,000 ಕೋಟಿ ಅನುದಾನ * ಈ ಬಾರಿ ಸಾಮಾಜಿಕ ಕ್ಷೇತ್ರದ ವೆಚ್ಚ ಪ್ರಮಾಣದಲ್ಲಿ ಶೇ.17ರ ಹೆಚ್ಚಳದ ಪ್ರಸ್ತಾಪ. * ಮೂಲಭೂತ ಸೌಕರ್ಯಗಳ ಮೇಲಿನ ಹೂಡಿಕೆ ಶೇ.23ಕ್ಕೆ ಏರಿಕೆ * ನ್ಯಾಯಾಂಗದ ಸುಧಾರಣೆಗೆ 1,000 ಕೋಟಿ ನಿಧಿ * ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮಕ್ಕೆ 500 ಕೋಟಿ * ಬೆಂಗಳೂರು ಮೆಟ್ರೋಗೆ ಇನ್ನಷ್ಟು ಹಣಕಾಸು ನೆರವು
ಮಧ್ಯಮ ವರ್ಗದವರಿಗೆ... * ಕಡು ಬಡವರಿಗೆ ಗ್ಯಾಸ್ ದರದಲ್ಲಿ ರಿಯಾಯಿತಿ * ಆಹಾರ ಪದಾರ್ಥಗಳ ಬೆಲೆಯೇರಿಕೆ ತಡೆಗೆ ಕ್ರಮ * ಆಹಾರ ಭದ್ರತೆಗೆ 1,60,807 ಕೋಟಿ ರೂ. ಮೀಸಲು
ಗ್ರಾಮೀಣಾಭಿವೃದ್ಧಿಗೆ... * ನಬಾರ್ಡ್ಗೆ 3,000 ಕೋಟಿ ರೂಪಾಯಿಗಳನ್ನು ನೀಡುವ ಪ್ರಸ್ತಾವನೆ * ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ * ಗ್ರಾಮೀಣ ಫೋನ್ಗೆ 10,000 ಕೋಟಿ * ಗ್ರಾಮೀಣಾಭಿವೃದ್ಧಿ ನಿಧಿ 18,000 ಕೋಟಿ ಏರಿಕೆ * ಗ್ರಾಮೀಣಾಭಿವೃದ್ಧಿಯ ವಿವಿಧ ಯೋಜನೆಗಳಿಗೆ 58,000 ಕೋಟಿ * ಇನ್ನೂ 20,000 ಹಳ್ಳಿಗಳಿಗೆ ಬ್ಯಾಂಕಿಂಗ್ ಸೇವೆ ವಿಸ್ತರಣೆ
ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ... * ಅಂಗನವಾಡಿ ಕಾರ್ಯಕರ್ತೆಯರ ವೇತನ 1,500ರಿಂದ 3,000ಕ್ಕೆ ಹಾಗೂ ಸಹಾಯಕಿಯರಿಗೆ 750ರಿಂದ 1,500 ರೂಪಾಯಿಗಳಿಗೆ ಏರಿಕೆ. * ಪ್ರಾಥಮಿಕ ಶಿಕ್ಷಣಕ್ಕೆ 21,000 ಕೋಟಿ ರೂಪಾಯಿ. * ಪರಿಶಿಷ್ಟ ಜಾತಿ-ವರ್ಗಗಳ ಸ್ಕಾಲರ್ಶಿಪ್ ಹೆಚ್ಚಳ * ಆಲಿಘಡ ಮುಸ್ಲಿಂ ವಿವಿಗೆ 50 ಕೋಟಿ * ಶಿಕ್ಷಣ ಕ್ಷೇತ್ರಕ್ಕೆ 52,057 ಕೋಟಿ ರೂಪಾಯಿ ಅನುದಾನ * ಉಚಿತ-ಕಡ್ಡಾಯ ಸರ್ವಶಿಕ್ಷಣ ಅಭಿಯಾನಕ್ಕೆ 21,000 ಕೋಟಿ ರೂ. * ಶೈಕ್ಷಣಿಕ ಯೋಜನಾ ವೆಚ್ಚ ಶೇ.24ರಷ್ಟು ಹೆಚ್ಚಳ
ಕೃಷಿಕರಿಗೆ ಏನೇನು? * ಸಕಾಲದಲ್ಲಿ ಕೃಷಿ ಸಾಲ ಮರು ಪಾವತಿ ಮಾಡಿದವರಿಗೆ ಶೇ.3ರ ಬಡ್ಡಿ ದರ ರಿಯಾಯಿತಿ * ಕೃಷಿ ಸಾಲ ಪ್ರಮಾಣ 3.75ರಿಂದ 4.75 ಲಕ್ಷ ರೂ.ಗಳಿಗೆ ಏರಿಕೆ. * ಕೃಷಿ ವಲಯದ ಅಭಿವೃದ್ಧಿಗೆ 7,860 ಕೋಟಿ ರೂ. ಮೀಸಲು * ಅಲ್ಪಾವಧಿ ಸಾಲದ ಬಡ್ಡಿ ದರ ಶೇ.7ರಲ್ಲಿ ಯಾವುದೇ ಬದಲಾವಣೆಯಿಲ್ಲ. * ಅಲ್ಪಾವಧಿ ಸಾಲಕ್ಕೆ 10,000 ಕೋಟಿ ಮೀಸಲು. * ತರಕಾರಿಗಾಗಿ ದೇಶದಲ್ಲಿ 15 ಮೆಗಾ ಫುಡ್ ಪಾರ್ಕುಗಳ ಸ್ಥಾಪನೆ * ಕೃಷಿಯಲ್ಲಿ ಖಾಸಗಿ ಬಂಡವಾಳ ಹೂಡಿಕೆ ನೀತಿ ಮುಂದುವರಿಕೆ * ರೈತರ ಸಾಲ ನಿಧಿ 4.07 ಲಕ್ಷ ಕೋಟಿಗೆ ಏರಿಕೆ * ಯೂರಿಯಾಗೆ ಹೊಸ ರಸಗೊಬ್ಬರ ನೀತಿ * ರಸಗೊಬ್ಬರ ಮತ್ತು ಸೀಮೆ ಎಣ್ಣೆಗೆ ನೇರ ತೆರಿಗೆಯಲ್ಲಿ ವಿನಾಯಿತಿ
ಆದಾಯ ಮತ್ತು ಇತರ ತೆರಿಗೆಗಳು... * ಸಂಬಳದಾರರಲ್ಲಿ ಕೆಲವರಿಗೆ ತೆರಿಗೆಯಲ್ಲಿ ವಿನಾಯಿತಿ * ವೇತನದಾರರ ಆದಾಯ ಕರ ಮಿತಿ 1.60 ಲಕ್ಷದಿಂದ 1.80 ಲಕ್ಷಕ್ಕೆ ಏರಿಕೆ. * ಹೊಸ ವಿಭಾಗ ಅಸ್ತಿತ್ವಕ್ಕೆ- 80 ವರ್ಷ ಮೇಲ್ಪಟ್ಟವರಿಗೆ ತೆರಿಗೆ ಮಿತಿ 5 ಲಕ್ಷ. * ಮಹಿಳೆಯರ ಆದಾಯ ತೆರಿಗೆ ಮಿತಿ ಬದಲಾವಣೆಯಿಲ್ಲ. * ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ವಿನಾಯಿತಿ * ತೆರಿಗೆ ಪ್ರಕ್ರಿಯೆ ಸರಳೀಕರಣಕ್ಕೆ ಒತ್ತು * ನೇರ ತೆರಿಗೆ ಕೋಡ್ 2012ರಲ್ಲಿ ಜಾರಿ * ಉದ್ಯೋಗ ಖಾತ್ರಿಯ ಕೂಲಿ ಹಣ ಏರಿಕೆ * 2012ರ ಏಪ್ರಿಲ್ 1ರಿಂದ ನೇರ ತೆರಿಗೆ ಪದ್ಧತಿ ಜಾರಿ * ಆದಾಯ ತೆರಿಗೆ ಇ-ಫೈಲಿಂಗ್ ಇನ್ನಷ್ಟು ಸರಳ
ಏರಿಕೆಯಾದುವು-ಇಳಿಕೆಯಾದುವುಗಳು.... * ಕಾರ್ಪೊರೇಟ್ ತೆರಿಗೆ ಮೇಲಿನ ಮೇಲ್ತೆರಿಗೆಯನ್ನು ಶೇ.5ಕ್ಕೆ ಇಳಿಸುವ ಪ್ರಸ್ತಾಪ. * ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಯಾಣದ ತೆರಿಗೆ ಹೆಚ್ಚಳ * ಅಬಕಾರಿ ಸುಂಕದಲ್ಲಿ ಬದಲಾವಣೆಯಿಲ್ಲ * ಚಿನ್ನಾಭರಣಕ್ಕೆ ಅಬಕಾರಿ ಸುಂಕದಲ್ಲಿ ವಿನಾಯಿತಿ * ಬ್ರಾಂಡೆಡ್ ಗಾರ್ಮೆಂಟ್ಸ್ ಮೇಲೆ ಶೇ.10ರ ತೆರಿಗೆ * ಪ್ರಮುಖ ಆಹಾರ ಪದಾರ್ಥಗಳು, ತೈಲಕ್ಕೆ ಅಬಕಾರಿ ಸುಂಕ ಇಲ್ಲ * ಮೊಬೈಲ್, ನೂಲು ಮತ್ತು ಉಕ್ಕು ತೆರಿಗೆ ಕಡಿತ * ಕೃಷಿ ಯಂತ್ರೋಪಕರಣ ಸುಂಕ ಇಳಿಕೆ * ಸಿಮೆಂಟ್ ಮೇಲಿನ ಸುಂಕದಲ್ಲಿ ಶೇ.2.5 ಕಡಿತ * ಬ್ರಾಂಡೆಡ್ ಚಿನ್ನಾಭರಣ ದುಬಾರಿ * ಡೈಪರ್ಸ್, ಮೊಬೈಲ್, ಎಲ್ಇಡಿ, ಕಬ್ಬಿಣ, ಗೃಹೋಪಯೋಗಿ ವಸ್ತುಗಳ ಮೇಲಿನ ತೆರಿಗೆ ಕಡಿತ * ವಿದ್ಯುತ್ ಚಾಲಿತ ವಾಹನ ಮತ್ತಷ್ಟು ಅಗ್ಗ * ಸೋಲಾರ್ ಉಪಕರಣಗಳಿಗೆ ರಿಯಾಯಿತಿ * ಕಚ್ಚಾ ರೇಷ್ಮೆ, ಆಮದು ಫಿಲ್ಮ್ ರೋಲ್ಗಳು ಅಗ್ಗ * ಹೈಟೆಕ್ ಆಸ್ಪತ್ರೆಗಳ ಸೇವಾ ತೆರಿಗೆ ಹೆಚ್ಚಳ * ಹವಾನಿಯಂತ್ರಿತ ಬಾರುಗಳ ಸೇವಾ ತೆರಿಗೆ ಏರಿಕೆ * ಸಾಬೂನುಗಳ ದರ ಇಳಿಕೆ * ಮುದ್ರಣ ಯಂತ್ರಗಳ ಮೇಲಿನ ತೆರಿಗೆ ಇಳಿಕೆ * ಲೋಹ, ಹೊಟೇಲ್ ಬಾಡಿಗೆ ತೆರಿಗೆ ಹೆಚ್ಚಳ * ಬ್ಯಾಟರಿ ಚಾಲಿತ ವಾಹನಗಳು, ಹೋಮಿಯೋಪತಿ ಔಷಧಿ ಅಗ್ಗ * ವಿಮಾನ ಯಾನ, ಹವಾನಿಯಂತ್ರಿತ ಹೊಟೇಲುಗಳ ದರ ಹೆಚ್ಚಳ
ಇತರ ಮುಖ್ಯಾಂಶಗಳು... * ಆದ್ಯತಾ ವಲಯದಲ್ಲಿ ಮನೆ ಸಾಲ ಮಿತಿ 15ರಿಂದ 25 ಲಕ್ಷಕ್ಕೆ ಏರಿಕೆ * ಅವಧಿಯೊಳಗೆ ಪಾವತಿ ಮಾಡಿದರೆ 15 ಲಕ್ಷದವರೆಗಿನ ಗೃಹ ಸಾಲಕ್ಕೆ ಶೇ.1ರ ಬಡ್ಡಿ ರಿಯಾಯಿತಿ. * ಗೃಹ ಸಾಲದಲ್ಲಿನ ಬಡ್ಡಿ ರಿಯಾಯಿತಿ ಮಿತಿ ಇಳಿಕೆ. * 500 ಕೋಟಿ ರೂ.ಗಳ ಮೂಲಧನದೊಂದಿಗೆ ಸ್ತ್ರೀಯರ ಸ್ವಸಹಾಯ ಗುಂಪುಗಳ ಅಸ್ತಿತ್ವದ ಪ್ರಸ್ತಾಪ. * ಮೈಕ್ರೋಫೈನಾನ್ಸ್ ಕಂಪನಿಗಳಿಗೆ 100 ಕೋಟಿ ರೂಪಾಯಿಗಳ ಈಕ್ವಿಟಿ ಫಂಡ್. * ಮಾದಕ ವಸ್ತು ಕಳ್ಳ ಸಾಗಣೆ ತಡೆಗೆ ರಾಷ್ಟ್ರೀಯ ನೀತಿ ಜಾರಿ * ಕಪ್ಪುಹಣದ ವಾಪಸಾತಿಗಾಗಿ 11 ದೇಶಗಳೊಂದಿಗೆ ತೆರಿಗೆ ಮಾಹಿತಿ ವಿನಿಮಯಕ್ಕೆ ಸಹಿ * 80ಕ್ಕಿಂತ ಮೇಲ್ಪಟ್ಟ ವೃದ್ಧರ ವೃದ್ಧಾಪ್ಯ ವೇತನ 200 ರಿಂದ 500 ರೂಪಾಯಿಗಳಿಗೆ ಏರಿಕೆ * ವೃದ್ಯಾಪ್ಯ ವೇತನ ಮಿತಿ 65ರಿಂದ 60ಕ್ಕೆ ಇಳಿಕೆ * ಮುದ್ರಾಂಕ ಕಾಯ್ದೆ ತಿದ್ದುಪಡಿಗೆ ನಿರ್ಧಾರ * ರಕ್ಷಣಾ ಕ್ಷೇತ್ರಕ್ಕೆ 69,000 ಕೋಟಿ ರೂ. ಮೀಸಲು * ಜಾತಿ ಆಧರಿತ ಗಣತಿಗೆ ಜೂನ್ ತಿಂಗಳಲ್ಲಿ ಚಾಲನೆ * ಕರ್ತವ್ಯದಲ್ಲಿ ಅಂಗ ಊನತೆಗೊಳಗಾದ ಸೈನಿಕರ ಸವಲತ್ತು ಹೆಚ್ಚಳ * ಜಮ್ಮು-ಕಾಶ್ಮೀರ ಅಭಿವೃದ್ಧಿಗೆ 8,000 ಕೋಟಿ * ಈಶಾನ್ಯ ರಾಜ್ಯಗಳಿಗೆ 8,000 ಕೋಟಿ ಸಹಕಾರ.
ಸರಕಾರದ ಗುರಿಗಳು-ನಿರೀಕ್ಷೆಗಳು... * ಆರ್ಥಿಕ ಪ್ರಗತಿಗೆ ಒತ್ತು * ಖಾಸಗಿ ಬಂಡವಾಳಕ್ಕೆ ಆದ್ಯತೆ * ಕೈಗಾರಿಕಾ ವಲಯದ ಚೇತರಿಕೆ * ಕೃಷಿಕರಿಗೆ ಉತ್ತಮ ಬೆಲೆ ನೀಡಲು ಆದ್ಯತೆ * ಆರ್ಥಿಕ ದರ ಶೇ.9ಕ್ಕೆ ತಲುಪುವ ಯತ್ನ * ದೇಶದಲ್ಲಿ ಸಂಪನ್ಮೂಲ ಕೊರತೆಯಿಲ್ಲ * ದೇಶದ ಮೇಲೆ ವರುಣ ಕೃಪೆ ತೋರಲಿ * ಹಣದುಬ್ಬರವನ್ನು ಸಮರ್ಥವಾಗಿ ಎದುರಿಸುವುದು ನಮ್ಮ ಗುರಿ * ಗ್ರಾಮೀಣ ಭಾಗಕ್ಕೆ ಆದ್ಯತೆ ನೀಡುವತ್ತ ಗಮನ * 2011ರ ಆರ್ಥಿಕ ವರ್ಷದಲ್ಲಿ ಕೃಷಿ ಕ್ಷೇತ್ರದ ಪ್ರಗತಿ ಶೇ.5.4ರ ಗುರಿ. * 2011ರ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ.8.6ರ ಪ್ರಗತಿ ನಿರೀಕ್ಷೆ. * ಸಗಟು ಮತ್ತು ಚಿಲ್ಲರೆ ದರಗಳ ನಡುವಿನ ಅಗಾಧ ಅಂತರ ಸ್ವೀಕಾರಾರ್ಹವಲ್ಲ. * ಚಾಲ್ತಿ ಖಾತೆಯ ಆದಾಯ ಕೊರತೆ ಕಳವಳಕಾರಿ * 40 ಸಾವಿರ ಕೋಟಿ ಬಂಡವಾಳ ಹಿಂತೆಗೆತ ಗುರಿ * ಬ್ಯಾಂಕಿಂಗ್ ಲೈಸೆನ್ಸ್ಗೆ ಆರ್ಬಿಐ ಹೊಸ ನೀತಿ * ಪ್ರಸಕ್ತ ಶೇ.5.1ರಲ್ಲಿರುವ ವಿತ್ತೀಯ ಕೊರತೆಯನ್ನು 2011-12ರಲ್ಲಿ ಶೇ.4.6ಕ್ಕೆ ಇಳಿಸುವ ಗುರಿ.