ಉಗ್ರರ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಪಾಕಿಸ್ತಾನ ವಿಫಲ: ರಾಜನಾಥ್ ಸಿಂಗ್

ಬುಧವಾರ, 3 ಫೆಬ್ರವರಿ 2016 (22:00 IST)
ಭಾರತದೊಳಗೆ ಭಯೋತ್ಪಾದನೆಯ ರಫ್ತು ತಡೆಯುವಲ್ಲಿ ಪಾಕಿಸ್ತಾನ ಸರಕಾರ ವಿಫಲವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗುಡುಗಿದ್ದಾರೆ.
 
ಭಯೋತ್ಪಾದನೆ ನಿಗ್ರಹ ದಳದ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಸಿಂಗ್, ಪಾಕಿಸ್ತಾನ ಭಯೋತ್ಪಾದನೆಯನ್ನು ವಿದೇಶಿ ನೀತಿಯಂತೆ ಬಳಸಿ ಪ್ರೋತ್ಸಾಹ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಭಾರತ ದೇಶದಲ್ಲಿ ನಡೆಯುತ್ತಿರುವ ಉಗ್ರರ ದಾಳಿಗಳಿಗೆ ಪಾಕಿಸ್ತಾನ ಮೂಲ ಕಾರಣವಾಗಿದೆ. ಒಂದು ವೇಳೆ, ಉಗ್ರರ ನಿಗ್ರಹಕ್ಕೆ ಪಾಕಿಸ್ತಾನ ಪ್ರಾಮಾಣಿಕ ಪ್ರಯತ್ನ ಮಾಡಿದ್ದಲ್ಲಿ ಬಾರತಕ್ಕೆ ಉಗ್ರರ ಉಪಟಳವಿರುತ್ತಿರಲಿಲ್ಲ ಎಂದರು.
 
ಕಳೆದ 2008ರ ನವೆಂಬರ್ ತಿಂಗಳಲ್ಲಿ ನಡೆದ ಮುಂಬೈ ದಾಳಿಯಿಂದ ಇತ್ತೀಚಿನ ಪಠಾನ್‌ಕೋಟ್ ದಾಳಿಯವರೆಗಿನ ದಾಳಿಗಳು ಪಾಕಿಸ್ತಾನ ಪ್ರೇರಿತವಾಗಿವೆ. ದೇಶದ ಆಸ್ತಿಯಾಗಿರುವ ಸೂಕ್ಷ್ಮಪ್ರದೇಶಗಳನ್ನು ಗುರಿಯಾಗಿಸಿ ಅನಾಹುತ ಸೃಷ್ಟಿಸುವುದೇ ಉಗ್ರರ ಪ್ರಮುಖ ಗುರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.   
 
ನಮ್ಮ ಭದ್ರತಾ ಪಡೆಗಳು ಮತ್ತು ಗುಪ್ತಚರ ಏಜೆನ್ಸಿಗಳು ವಿನಾಶವನ್ನು ತಡೆದಿದ್ದಲ್ಲದೇ, ದೇಶದ ಸಂಪತ್ತನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.
 
ಒಂದು ವೇಳೆ, ಪಾಕಿಸ್ತಾನ ತನ್ನ ದೇಶದಲ್ಲಿ ಸುರಕ್ಷಿತ ತಾಣವಾಗಿಸಿಕೊಂಡಿರುವ ಉಗ್ರರನ್ನು ನಿರ್ಮೂಲನೆ ಮಾಡಿದ್ದಲ್ಲಿ, ಉಭಯ ದೇಶಗಳ ನಡುವೆ ಶಾಂತಿ ಮತ್ತು ಸ್ಥಿರತೆ ಕಂಡುಬರುತ್ತಿತ್ತು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ