293ನೇ ಗುರು: ವಿವಾದಿತ ನಿತ್ಯಾನಂದ ಸ್ವಾಮಿಗೆ ಹೊಸ ಪಟ್ಟ

ಶುಕ್ರವಾರ, 27 ಏಪ್ರಿಲ್ 2012 (14:54 IST)
PR
ರಾಸಲೀಲೆ ವಿವಾದಿತ ಬಿಡದಿ ನಿತ್ಯಾನಂದ ಸ್ವಾಮಿಯನ್ನು ತಮಿಳುನಾಡಿನ ಮಧುರೈಯ ಅಧೀನಮ್ ಪೀಠದ 293ನೇ ಪೀಠಾಧಿಪತಿಯನ್ನಾಗಿ ನೇಮಕ ಮಾಡುವ ಮೂಲಕ ಹೊಸ ಪಟ್ಟವನ್ನು ನೀಡಿದಂತಾಗಿದೆ.

ಮಧುರೈನ ಅಧೀನಮ್ ಧಾರ್ಮಿಕ ಸಂಸ್ಥೆಯ 292ನೇ ಪೀಠಾಧಿಪತಿ ಅರುಣಗಿರಿನಾಥ ಜ್ಞಾನಸಂಬಂಧ ಅವರು ಶುಕ್ರವಾರ ಅಧಿಕೃತವಾಗಿ ತಮ್ಮ ಸಂಸ್ಥೆಯ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿರುವುದಾಗಿ ಘೋಷಿಸಿದರು. ಅಷ್ಟೇ ಅಲ್ಲ ನಿತ್ಯಾನಂದ ಜ್ಞಾನಸಂಬಂಧ ಪರಮಾಚಾರ್ಯ ದೇಶಿಕಾನಂದ ಸ್ವಾಮಿ ಎಂಬ ಹೊಸ ನಾಮಕರಣ ಮಾಡಲಾಗಿದೆ.

ವಿವಾದಿತ ನಿತ್ಯಾನಂದ ಸ್ವಾಮಿಗೆ ಕಿರೀಟವನ್ನು ತೊಡಿಸಿ ಅಧೀನಮ್ ಪೀಠದ ನೂತನ ಉತ್ತರಾಧಿಕಾರಿಯನ್ನಾಗಿ ಪಟ್ಟಾಭಿಷೇಕ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಡದಿಯ ಸಮಾರಂಭದಲ್ಲಿ ನೆರೆದಿದ್ದ ದೇಶೀಯ ಮತ್ತು ವಿದೇಶಿ ಭಕ್ತರು ಕುಣಿದು ಕುಪ್ಪಳಿಸುವ ಮೂಲಕ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು.

ಏತನ್ಮಧ್ಯೆ ನಟಿ ರಂಜಿತಾ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ರಂಜಿತಾ ದೇಶೀಯ ಮತ್ತು ವಿದೇಶಿ ಭಕ್ತರು ಕುಣಿದು ಕುಪ್ಪಳಿಸುತ್ತಿದ್ದರೆ ತಾವು ಮಾತ್ರ ಗಂಭೀರವಾಗಿ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿದ್ದದ್ದು ವಿಶೇಷವಾಗಿತ್ತು.

ಪಟ್ಟಾಭಿಷೇಕದ ನಂತರ ಮಾತನಾಡಿದ ನಿತ್ಯಾನಂದ ಸ್ವಾಮಿ, ತನಗೆ ಪೀಠಾಧಿಪತಿ ಪಟ್ಟ ನೀಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಮಧುರೈ ಅಧೀನಮ್ ಧಾರ್ಮಿಕ ಸಂಸ್ಥೆಗೆ 1ಕೋಟಿ ರೂಪಾಯಿ ಕೊಡುಗೆ ನೀಡುವುದಾಗಿ ಘೋಷಿಸಿದ್ದಲ್ಲದೇ, ಈ ಸಂಸ್ಥೆಯನ್ನು ಅಂತಾರಾಷ್ಟ್ರೀಯ ಸಂಸ್ಥೆಯಾಗಿ ಪರಿವರ್ತಿಸುವುದಾಗಿ ಹೇಳಿದರು.

ವೆಬ್ದುನಿಯಾವನ್ನು ಓದಿ