4 ಕೋಟಿ ರೂಪಾಯಿಗಳನ್ನು ಸಾಗಿಸುತ್ತಿದ್ದ ಬಿಎಸ್ಪಿ ನಾಯಕನ ವಿರುದ್ಧ ಕೇಸ್ ದಾಖಲು

ಬುಧವಾರ, 9 ಏಪ್ರಿಲ್ 2014 (16:13 IST)
4 ಕೋಟಿ ರೂಪಾಯಿಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಬಹುಜನ್ ಸಮಾಜವಾದಿ ಪಕ್ಷದ ನಾಯಕ ನದೀಮ್‌ರವರ ಮೇಲೆ ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ ಎಂದು ಚುನಾವಣೆ ಆಯೋಗದ ಮೂಲಗಳು ತಿಳಿಸಿವೆ.
PTI

ಮೀರತ್‌ನ ಶಾಸ್ತ್ರೀನಗರದ ನಿವಾಸಿ ಬಿಎಸ್ಪಿ ನಾಯಕ ಮತ್ತು ಆಸ್ತಿ ಡೀಲರ್ ಆಗಿರುವ ನದೀಮ್, ತಮ್ಮ ಸಹಾಯಕ ಮೆರಝ್ ಜತೆ ಗಾಜಿಯಾಬಾದ್ ಹೊರಟಿದ್ದ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳ ತಂಡದಿಂದ ಸೆರೆಹಿಡಿಯಲ್ಪಟ್ಟಿದ್ದಾರೆ.

ಆತನ ಕಾರಿನಲ್ಲಿದ್ದ 4 ಕೋಟಿ ರೂಪಾಯಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಷ್ಟು ದೊಡ್ಡ ಮೊತ್ತದ ಹಣವನ್ನು ಇಟ್ಟುಕೊಂಡಿರುವುದಕ್ಕೆ ಕಾರಣವನ್ನು ವಿವರಿಸುವಂತೆ ಆತನಲ್ಲಿ ಕೇಳಲಾಯಿತು.

ಆದರೆ ಅದಕ್ಕೆ ಉತ್ತರಿಸಲು ಅವರು ವಿಫಲರಾದರು. ಹೀಗಾಗಿ ಆತನ ನಿವಾಸದಲ್ಲಿ ಪರಿಶೀಲನೆ ನಡೆಸಿದ ವರಮಾನ ತೆರಿಗೆ ಅಧಿಕಾರಿಗಳು ಹಣಕ್ಕೆ ಆಧಾರವಾದ ದಾಖಲೆಗಳು ಸಿಗದಿದ್ದಾಗ, ಆತನ ಮೇಲೆ ಕೇಸ್ ದಾಖಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದಾಯ ತೆರಿಗೆಯವರು ವಶಪಡಿಸಿಕೊಂಡ ಹಣ ಕಪ್ಪು ಹಣ ಎಂದು ಬಿಎಸ್ಪಿ ಮುಖಂಡ ಒಪ್ಪಿಕೊಂಡಿದ್ದಾನೆ.

ತಾವು ವಶಪಡಿಸಿಕೊಂಡ ಹಣವನ್ನು ತೆರಿಗೆ ಅಧಿಕಾರಿಗಳು ಜಿಲ್ಲಾಡಳಿತದ ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಿದ್ದಾರೆ.

ಈ ಬೃಹತ್ ನಗದನ್ನು ಉತ್ತರಪ್ರದೇಶದ ಲೋಕಸಭಾ ಚುನಾವಣೆಯಲ್ಲಿ ಬಳಸಲು ಕೊಂಡೊಯ್ಯಲಾಗುತ್ತಿತ್ತು ಎಂದು ಆಯೋಗದ ಅಧಿಕಾರಿಗಳು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

ಈ ನಗದಿನ ಸಂಭಾವ್ಯ ಫಲಾನುಭವಿಗಳನ್ನು ಖಚಿತಪಡಿಸಿಕೊಳ್ಳಲು ಸಹ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ