ಕಳೆದ ಅಕ್ಟೋಬರ್ 15 ರಂದು ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ತಾವು ಬೆಂಬಲಿಸಿದ ಅಭ್ಯರ್ಥಿಗೆ ಮತ ಹಾಕಲಿಲ್ಲವೆಂಬ ಕಾರಣಕ್ಕೆ65 ವರ್ಷದ ವೃದ್ಧೆಯೊಬ್ಬಳಿಗೆ ಬೆಂಕಿ ಹಚ್ಚಿದ ಘಟನೆ ನಾಸಿಕ್ನಿಂದ 90 ಕೀಮಿ ದೂರದಲ್ಲಿರುವ ಯೇವೋಲಾದ ಬಬುಲ್ಗಾಂವ್ ಎಂಬ ಹಳ್ಳಿಯಲ್ಲಿ ನಡೆದಿದೆ. 80% ಪ್ರತಿಶತ ಸುಟ್ಟ ಗಾಯಗಳಿಂದ ಬಳಲುತ್ತಿರುವ ಆಕೆ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ.
ಜೆಲುಬಾಯಿ ಜಗನ್ನಾಥ್ ವೇಬಲ್ಸ್ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಅಶೋಕ್ ಬೊರ್ನಾರೆ (38), ಪಾಂಡುರಂಗ್ ಬೊರ್ನಾರೆ( 45) ಮತ್ತು ನಂದಕಿಶೋರ್ ಬುರಾಕ್ (40) ಎಂಬುವವರನ್ನು ಬಂಧಿಸಿದ್ದು ಅವರ ಮೇಲೆ ಕೊಲೆ ಯತ್ನ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರನ್ನು ಯೇವೋಲಾ ಕೋರ್ಟಿಗೆ ಹಾಜರುಪಡಿಸಬೇಕಿದ್ದು, ಅಕ್ಟೋಬರ್ 20 ರ ತನಕ ಪೊಲೀಸ್ ಕಸ್ಟಡಿಗೆ ಒಳಪಡಿಸಲಾಗಿದೆ.