ಸೊಸೆಯನ್ನು ಕೊಂದ ಅತ್ತೆ ಮಾವ

ಶನಿವಾರ, 18 ಏಪ್ರಿಲ್ 2015 (13:38 IST)
ವರದಕ್ಷಿಣೆ ತರಲಿಲ್ಲವೆಂಬ ಕಾರಣಕ್ಕೆ ಅತ್ತೆ ಮಾವ ಮತ್ತು ನಾದಿನಿ ಸೇರಿ ಮಹಿಳೆಯನ್ನು ಕೊಂದ ಕರಾಳ ಘಟನೆ ಫರಿದಾಬಾದ್‌ನಲ್ಲಿ ವರದಿಯಾಗಿದೆ. 

ಮೃತಳ ತಂದೆ ಧೀರ್ಪುರ್ ನಿವಾಸಿ ಶಿವಕುಮಾರ್ ನೀಡಿರುವ ದೂರಿನ ಪ್ರಕಾರ, ಆತ ತನ್ನ ಮಗಳನ್ನು ಕಾಮೇಶ್ವರದ  ರಾಮಶಂಕರ್ ಎಂಬುವವರ ಮಗನಿಗೆ ಕಳೆದ ವರ್ಷ ಮದುವೆ ಮಾಡಿ ಕಳುಹಿಸಿದ್ದ ಎಂದು ತನಿಖಾಧಿಕಾರಿ ಸುರೇಶ್ ಕುಮಾರ್ ತಿಳಿಸಿದ್ದಾರೆ. 
 
ಮದುವೆಯಾದಾಗಿನಿಂದಲೂ ಸೊಸೆಯನ್ನು  ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ ಅತ್ತೆ ಮಾವ, ಆಕೆಗೆ ನಿರಂತರ ಚಿತ್ರಹಿಂಸೆ ನೀಡುತ್ತಿದ್ದರಲ್ಲದೇ, ತಮ್ಮ  ಬೇಡಿಕೆ ಪೂರೈಸದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕುತ್ತಿದ್ದರು. 
 
ಕಳೆದ ಬುಧವಾರ ತನ್ನ ತಂದೆಗೆ ಕರೆ ಮಾಡಿದ್ದ ಪೀಡಿತೆ ಅತ್ತೆ ಮಾವಂದಿರು ತನ್ನನ್ನು ಕೊಲ್ಲಲು ಯೋಜನೆ ರೂಪಿಸುತ್ತಿದ್ದಾರೆ. ದಯವಿಟ್ಟು ಇಲ್ಲಿಂದ ಕರೆದೊಯ್ಯಿರಿ ಎಂದು ಹೇಳಿದ್ದಳು ಎಂದು ತಿಳಿದು ಬಂದಿದೆ. 
 
ಅದೇ ದಿನ ನಾಲ್ಕು ಗಂಟೆಗೆ ಶಿವಕುಮಾರ್ ಮಗಳ ನಾದಿನಿ ಕರೆ ಮಾಡಿ ಅತ್ತಿಗೆ ಆಕಸ್ಮಿಕವಾಗಿ ಸಾವನ್ನಪ್ಪಿದಳು ಎಂದು ಹೇಳಿದ್ದಾಳೆ. ತಕ್ಷಣ ಅಲ್ಲಿಗೆ ಧಾವಿಸಿದ ಮೃತಳ ತಂದೆ  ಫ್ಯಾನ್‌ ಒಂದರಲ್ಲಿ ತೂಗುತ್ತಿರುವ ಮಗಳನ್ನು ಕಂಡು ಆಘಾತಕ್ಕೆ ಒಳಗಾಗಿದ್ದಾನೆ. 
 
ತಮ್ಮ ಮಗಳನ್ನು ಕೊಂದು ನೇತು ಹಾಕಲಾಗಿದೆ ಎಂದು ಮೃತಳ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ