ಅಸಹಿಷ್ಣುತೆ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಿರುವಂತೆ ಬಾಲಿವುಡ್ ನಟ ಅಮೀರ್ ಖಾನ್ ಪ್ರತಿಕ್ರಿಯೆ ನೀಡಿದ್ದು, ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನಾನು ಭಾರತೀಯನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ದೇಶವನ್ನು ತೊರೆಯುವ ಯಾವುದೇ ಉದ್ದೇಶವಿಲ್ಲ. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನಾನು ಅಥವಾ ನನ್ನ ಪತ್ನಿ ಕಿರಣ್ ದೇಶವನ್ನು ಬಿಟ್ಟು ಹೋಗುವ ಯಾವುದೇ ಉದ್ದೇಶವಿಲ್ಲ. ದೇಶವನ್ನು ಇಂದಲ್ಲ ಯಾವತ್ತೂ ಬಿಟ್ಟು ಹೋಗುವ ಉದ್ದೇಶವಿಲ್ಲ. ಭಾರತ ನನ್ನ ದೇಶ, ನನ್ನ ದೇಶವನ್ನು ನಾನು ಪ್ರೀತಿಸುತ್ತೇನೆ. ನಾನು ಭಾರತದಲ್ಲಿ ಜನಿಸಿರುವುದು ಅದೃಷ್ಟದ ಸಂಗತಿ ಎಂದು ನಾನು ಹೇಳಿದ್ದೇನೆ. ಆದರೆ, ಕೆಲವರು ನನ್ನ ಸಂದರ್ಶನವನ್ನು ತಿರುಚಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಷ್ಟ್ರದ್ರೋಹಿ ಎನ್ನುವ ಟೀಕೆಗೆ ಗುರಿಯಾಗಿದ್ದರೂ ನನ್ನ ಪರವಾಗಿ ನಿಂತ ಎಲ್ಲರಿಗೂ ಅಭಿನಂದನೆಗಳು. ನಮ್ಮ ದೇಶದ ಏಕತೆ, ಸಂಸ್ಕ್ರತಿ, ತಾಳ್ಮೆ, ಇತಿಹಾಸ,ಸಾಮರಸ್ಯತೆಯನ್ನು ನಾವು ರಕ್ಷಿಸಬೇಕಾಗಿದೆ ಎಂದು ಬಾಲಿವುಡ್ ಅಮೀರ್ ಖಾನ್ ಹೇಳಿದ್ದಾರೆ.