ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ, ಆಪ್ ನಮ್ಮ ಪ್ರಬಲ ಎದುರಾಳಿ: ಅಮಿತ್ ಶಾ

ಶುಕ್ರವಾರ, 23 ಜನವರಿ 2015 (13:23 IST)
ಪ್ರಮುಖ ಎದುರಾಳಿ ಆಮ್ ಆದ್ಮಿ ಪಕ್ಷದ ವಿರುದ್ಧ ಬಿಜೆಪಿ ನೇರ ಹಣಾಹಣಿ ನಡೆಸಲಿದ್ದು, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಮಗೆ ಸ್ಪರ್ಧಿಯೇ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. 
 
ದೆಹಲಿಯ ಪೂರ್ವ ಬಿಜೆಪಿ ಬೂತ್ ಉಸ್ತುವಾರಿ ವಹಿಸಿಕೊಂಡಿರುವ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಶಾ, ಕಠಿಣ ಪರಿಶ್ರಮ ವಹಿಸಿ ಕೆಲಸ ಮಾಡಿ. ಪ್ರತಿ ಮತದಾರನ ಮನೆಗೆ ಹೋಗಿ ಆಪ್‌ನ ಸುಳ್ಳು ಭರವಸೆಗಳ ಕುರಿತು ಸ್ಪಷ್ಪಪಡಿಸಿ. ಪಕ್ಷ ದೆಹಲಿಯಲ್ಲಿ ಗೆಲ್ಲಲು ಯಶ ಕಂಡರೆ ಅದು ಸಂಪೂರ್ಣ ದೇಶದಲ್ಲಿ "ಅಜೇಯ" ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ ಎಂದು ಹೇಳಿದರು. 
 
ಸಂಪೂರ್ಣ ದೇಶ ಮತ್ತು ವಿಶ್ವದ ಕಣ್ಣೀಗ ದೆಹಲಿ ವಿಧಾನಸಭಾ ಚುನಾವಣೆಯ ಮೇಲಿದೆ. ನಾವು ದೆಹಲಿಯಲ್ಲಿ ಗೆಲುವನ್ನು ಪಡೆದರೆ ನಮ್ಮನ್ನು ದೇಶದ ಇನ್ಯಾವುದೇ ಭಾಗಗಳಲ್ಲಿ ತಡೆಯುವವರು ಯಾರೂ ಇರಲಾರರು. ನಾವು ದೆಹಲಿ ಚುನಾವಣೆಯಲ್ಲಿ ಜಯ ಗಳಿಸಿದರೆ ಸಾಕು, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಅಟಕ್‌ನಿಂದ ಕಟಕ್‌ವರೆಗೆ ನಮ್ಮನ್ನು ಯಾರೂ ತಡೆದು ನಿಲ್ಲಿಸಲಲಾರರು  ಎಂದು ಶಾ ಅಭಿಪ್ರಾಯ ಪಟ್ಟಿದ್ದಾರೆ. 
 
ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲಿಯೂ ಕಾಣಿಸುತ್ತಿಲ್ಲ. ನಾವು ಕೇವಲ ಆಮ್ ಆದ್ಮಿ ಪಕ್ಷದ ಜತೆ ಹೋರಾಡಬೇಕಿದೆ ಎಂದು ಶಾ ಹೇಳಿದ್ದಾರೆ. 
 
2014 ಬಿಜೆಪಿ ಪಾಲಿಗೆ "ಅಭೂತಪೂರ್ವ ವರ್ಷ". ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ನಮ್ಮ ಗೆಲುವಿನ ಅಭಿಯಾನ ಅನೇಕ ರಾಜ್ಯಗಳಲ್ಲಿ ಮುಂದುವರೆಯಿತು. ಬಿಹಾರದಲ್ಲಿ ಜಯಭೇರಿ ಬಾರಿಸುವ ಮೊದಲು ನಮ್ಮ ನಡೆ ದೆಹಲಿಯ ಕಡೆಗಾಗಿದೆ ಎಂದು ಶಾ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ