ಮಾರ್ಚ್ 12, 1993ರ ಮುಂಬೈ ಸರಣಿ ಬಾಂಬ್ ಸ್ಪೋಟದ ಆರೋಪಿ, ಭೂಗತ ಲೋಕದ ಪಾತಕಿ ಅಬು ಸಲೇಂ ತನ್ನನ್ನು ಮದುವೆಯಾಗಲು ಅನುಮತಿ ನೀಡಿ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದ ಮಹಿಳೆಯ ಜತೆ ವಿವಾಹ ಬಂಧನಕ್ಕೆ ಒಳಗಾಗಲು ಸಮ್ಮತಿ ವ್ಯಕ್ತ ಪಡಿಸಿದ್ದಾನೆ.
ಟಾಡಾದಡಿ ಕೋರ್ಟ್ನಲ್ಲಿ ಯುವತಿ ಸಲ್ಲಿಸಿದ್ದ ಮನವಿ ಕುರಿತು ಪ್ರತಿಕ್ರಿಯಿಸಿರುವ ಸಲೇಂ, "ಆಕೆಯ ಮನವಿಯನ್ನು ಪುರಸ್ಕರಿಸಿ ವಿಶೇಷ ವಿವಾಹ ಕಾಯಿದೆಯ ಅಡಿಯಲ್ಲಿ ರಿಜಿಸ್ಟ್ರಾರ್ ಸಮ್ಮುಖದಲ್ಲಿ ನಾವಿಬ್ಬರು ವಿವಾಹ ಬಂಧನಕ್ಕೆ ಒಳಗಾಗಲು ಅನುಮತಿ ನೀಡಬೇಕೆಂದು ನಾನು ಕೇಳಿಕೊಳ್ಳುತ್ತೇನೆ", ಎಂದು ಕೋರಿಕೊಂಡಿದ್ದಾನೆ.
"ಆಕೆ ನನ್ನನ್ನು ಮದುವೆಯಾದ ನಂತರ ಆಕೆಯನ್ನು ಗೌರವಪೂರ್ವಕವಾಗಿ, ಕಾಳಜಿಯಿಂದ ನೋಡಿಕೊಳ್ಳುತ್ತೇನೆ. ಅಧಿಕೃತವಾಗಿ ನನ್ನ ಪತ್ನಿಯಾಗುವುದರಿಂದ ಆಕೆಯ ಹೆಸರಿಗೆ ಮತ್ತೆ ಕಳಂಕ ತಗಲುವುದಿಲ್ಲ. ನಾನು ಮಹಿಳೆಯರ ಭಾವನೆಗಳನ್ನು ಗೌರವಿಸುತ್ತೇನೆ ಮತ್ತು ಆಕೆಗೆ ಒದಗಿರುವ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಲ್ಲೆ", ಎಂದು ಭಾರೀ ಭದ್ರತೆಯನ್ನು ಹೊಂದಿರುವ ನವಿ ಮುಂಬೈನ ತಾಲೋಜಾ ಕಾರಾಗೃಹದಲ್ಲಿ ಬಂಧಿತನಾಗಿರುವ ಸಲೇಂ ಹೇಳಿದ್ದಾನೆ.
ಆಕೆ ತನ್ನ ತಾಯಿ, ಹಿರಿಯ ಸಹೋದರ ಮತ್ತು ಅಜ್ಜನ ಜತೆ ಜತೆ ವಾಸವಾಗಿದ್ದಾಳೆ.
ಸಲೇಂನನ್ನು ರೈಲಿನಲ್ಲಿ ಲಖನೌಗೆ ಕರೆದುಕೊಂಡು ಹೋಗುತ್ತಿದ್ದಾಗ ಯುವತಿಯೊಬ್ಬಳ ಜತೆ ಆತ ಮದುವೆಯಾದ ಎಂದು ಇದೇ ಯುವತಿಯ ಕುರಿತು ಸುದ್ದಿ ಹರಿದಾಡಿತ್ತು. "ನನ್ನ ಮದುವೆಯ ಕುರಿತು ಹುಟ್ಟಿಕೊಂಡ ಸುಳ್ಳು ಸುದ್ದಿಗಳಿಂದ ಬಹಳಷ್ಟು ವಿವಾದಗಳು ಸೃಷ್ಟಿಯಾಗಿವೆ. ಹೀಗಾಗಿ ನನ್ನ ಜತೆ ಮದುವೆಯಾಗಲು ಯಾರು ಕೂಡ ಒಪ್ಪುತ್ತಿಲ್ಲ. ಆದ್ದರಿಂದ ಅಬು ಸಲೇಂನನ್ನೇ ಮದುವೆಯಾಗಲು ಬಯಸಿದ್ದೇನೆ. ಇದಕ್ಕೆ ಅನುಮತಿ ನೀಡಿ. ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ", ಎಂದು ಯುವತಿ ಕೋರ್ಟ್ ಮೆಟ್ಟಿಲೇರಿದ್ದಾಳೆ.