ಮೊಬೈಲ್ ಕದ್ದ ಶಂಕೆ; ಐವರು ಬಾಲಕರ ಕೈಯ್ಯನ್ನು ಕುದಿಯುವ ಎಣ್ಣೆಯಲ್ಲಿ ಅದ್ದಿಸಿದ

ಮಂಗಳವಾರ, 21 ಫೆಬ್ರವರಿ 2017 (15:18 IST)
ಮೊಬೈಲ್ ಕದ್ದಿದ್ದಾರೆಂಬ ಶಂಕೆಯಲ್ಲಿ ಐವರು ಬಾಲಕರ ಕೈಯ್ಯನ್ನು ಕುದಿಯುವ ಎಣ್ಣೆಯಲ್ಲಿ ಅದ್ದಿಸಿದ ಪೈಶಾಚಿಕ ಕೃತ್ಯ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿದೆ.
ಈ ಹೇಯ ಕೃತ್ಯವನ್ನೆಸಿರುವ ಆರೋಪಿಯನ್ನು ಛಗನ್ ಎಂದು ಗುರುತಿಸಲಾಗಿದೆ. ಈತ ತನ್ನ ಮಗನಿಗೆ ಮೊಬೈಲ್ ಕೊಡಿಸಿದ್ದ. ತನ್ನ ಸ್ನೇಹಿತರ ಜತೆಗಿದ್ದಾಗ ಆತ ಮೊಬೈಲ್ ಕಳೆದುಕೊಂಡಿದ್ದಾನೆ.ತನ್ನ ಗೆಳೆಯರಲ್ಲಿ ಯಾರೋ ಒಬ್ಬ ಮೊಬೈಲ್ ಕದ್ದಿರಬೇಕೆಂದು ಮಗ ತಂದೆಯಲ್ಲಿ ಹೇಳಿದ್ದು, ಒಬ್ಬೊಬ್ಬರನ್ನು ಕರೆದು ಛಗನ್ ವಿಚಾರಿಸಿದ್ದಾನೆ. ಆದ್ರೆ ಎಲ್ಲರೂ ತಾವು ಮೊಬೈಲ್ ಕದ್ದಿಲ್ಲ ಎಂದು ಹೇಳಿದ್ದಾರೆ, 
 
ಆದರೆ ಅವರಿಂದ ಬಾಯಿ ಬಿಡಿಸಲೇ ಬೇಕೆಂದುಕೊಂಡ ಛಗನ್ ಮನೆಗೆ ಕರೆದೊಯ್ದು ಕುದಿಯುವ ಎಣ್ಣೆಯಲ್ಲಿ ಅವರ ಕೈಯ್ಯನ್ನು ಮುಳುಗಿಸಿದ್ದಾನೆ. 
 
ಮನೆಗೆ ಹೋದ ಬಾಲಕರು ಪೋಷಕರ ಬಳಿ ಛಗನ್ ಕೃತ್ಯವನ್ನು ವಿವರಿಸಿದ್ದು, ಹೌಹಾರಿದ ಪೋಷಕರು ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಮೂವರು ಬಾಲಕರ ಕೈಗೆ ಗಂಭೀರವಾದ ಗಾಯಗಳಾಗಿದ್ದು ಎಲ್ಲರಿಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. 
 
ದುರುಳ ಛಗನ್‌ನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ