ಆದರ್ಶ್ ಹೌಸಿಂಗ್ ಹಗರಣ: ಮಾಜಿ ಸಿಎಂ ಅರ್ಜಿ ವಜಾಗೊಳಿಸಿದ ಮುಂಬೈ ಕೋರ್ಟ್

ಬುಧವಾರ, 4 ಮಾರ್ಚ್ 2015 (12:56 IST)
ಆದರ್ಶ್ ಹೌಸಿಂಗ್ ಸೊಸೈಟಿ ಹಗರಣ ಸಂಬಂಧ ದಾಖಲಾಗಿದ್ದ ಎಫ್ಐಆರ್‌ನಿಂದ ತಮ್ಮ ಹೆಸರನ್ನು ಕೈಬಿಡುವಂತೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್ ಚೌವ್ಹಾಣ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಮುಂಬೈ ಹೈಕೋರ್ಟ್ ಇಂದು ತಿರಸ್ಕರಿಸಿದ್ದು, ಪ್ರಕರಣದಲ್ಲಿ ಚೌವ್ಹಾಣ್‌ಗೆ ಮತ್ತಷ್ಟು ಹಿನ್ನಡೆಯುಂಟಾಗಿದೆ. 
 
ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯ, ಪ್ರಕರಣದಲ್ಲಿ ಚೌವ್ಹಾಣ್ ಭಾಗಿಯಾಗಿರುವುದು ದಾಖಲೆಗಳಿಂದ ಸಾಬೀತಾಗಿದ್ದು, ಅವರ ಹೆಸರನ್ನು ತನಿಖೆಯಿಂದ ಕೈಬಿಡಲು ಸಾಧ್ಯವಿಲ್ಲ. ಅಲ್ಲದೆ ಅವರ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಆದೇಶಿಸಿ ಮೇಲ್ಮನವಿ ಅರ್ಜಿಯನ್ನು ತಿರಸ್ಕರಿಸಿದೆ. 
 
ಕಾರ್ಗಿಲ್ ಯೋಧರು ಮತ್ತು ಹುತಾತ್ಮರ ಪತ್ನಿಯರಿಗೆ ಮೀಸಲಾಗಿದ್ದ ಆದರ್ಶ್ ಹೌಸಿಂಗ್ ಸೊಸೈಟಿ ಯೋಜನೆಯಲ್ಲಿ ಹಲವು ರಾಜಕಾರಣಿಗಳು ಫ್ಲ್ಯಾಟ್ ಪಡೆದಿರುವುದು ಬಹಿರಂಗವಾಗಿತ್ತು. ಬಳಿಕ ಪ್ರಕರಣದಲ್ಲಿ ಚವ್ಹಾಣ್ ಭಾಗಿಯಾಗಿದ್ದು, ಅವರ ಅತ್ತೆ ಮತ್ತು ಇತರ ಇಬ್ಬರು ಸಂಬಂಧಿಕರು ಕೂಡ ಫ್ಲ್ಯಾಟ್ ಕೊಡಿಸಿದ್ದಾರೆ ಎಂಬ ವಿಷಯ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಹೇಸರನ್ನೂ ಕೂಡ ಹಗರಣದಲ್ಲಿ ಪರಿಗಣಿಸಲಾಗಿತ್ತು. 
 
ಒಟ್ಟಾರೆ ಈ ಯೋಜನೆ ಅಡಿಯಲ್ಲಿ 103 ಮಂದಿ ವಿವಾದಿತ ವ್ಯಕ್ತಿಗಳಿಗೆ ಮಿಲಿಟರಿಗೆ ಸೇರಿದ ಕಟ್ಟಡದಲ್ಲಿ ಮನೆಗಳನ್ನು ಹಂಚಕೆ ಮಾಡಲಾಗಿತ್ತು. ಇದರಲ್ಲಿ ರಕ್ಷಣಾ ಇಲಾಖೆಯ ಮಾಜಿ ಮುಖ್ಯಸ್ಥರು, ಕಾಂಗ್ರೆಸ್ ಮತ್ತಿತರ ಪಕ್ಷಗಳ ನಾಯಕರು, ಅಧಿಕಾರಿಗಳು ಸೇರಿದ್ದಾರೆ ಎಂದು ವರದಿಗಳು ತಿಳಿಸಿದ್ದವು. 
 
ಇದರಲ್ಲಿ ತನ್ನ ಅತ್ತೆ ಮತ್ತು ಇಬ್ಬರು ಸಂಬಂಧಿಕರಿಗೆ ನೀಡಿರುವ ಫ್ಲ್ಯಾಟ್‌ಗಳನ್ನು ಹಿಂತಿರುಗಿಸಲಾಗಿದೆ ಎಂದು ಚವ್ಹಾಣ್ ಈ ಹಿಂದೆಯೇ ಹೇಳಿಕೆ ನೀಡಿದ್ದರು. ಅಲ್ಲದೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೂಡ ಸಲ್ಲಿಸಿದ್ದರು. ಸ್ವತಃ ಕಂದಾಯ ಸಚಿವರಾಗಿದ್ದಾಗ ಚವ್ಹಾಣ್ ಈ ಪ್ರಕರಣದಲ್ಲಿ ಬಾಗಿಯಾಗಿದ್ದರು ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ