ನರೇಂದ್ರ ಮೋದಿ ದಕ್ಷ ಪ್ರಧಾನಿ ಆದ್ರೂ ವಾಜಪೇಯಿಯವರಿಗೆ ಸರಿಸಮಾನರಲ್ಲ: ಆಡ್ವಾಣಿ ಟಾಂಗ್

ಗುರುವಾರ, 2 ಅಕ್ಟೋಬರ್ 2014 (19:29 IST)
ಪ್ರಧಾನಿಯಾಗಿ ನರೇಂದ್ರ ಮೋದಿಯವರ ಕಾರ್ಯದ ಬಗ್ಗೆ ಯಥೇಚ್ಛ ಮೆಚ್ಚುಗೆ ವ್ಯಕ್ತಪಡಿಸಿರುವ ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ,  ಏನೇ ಆಗಲಿ ದೇಶ ಅಟಲ್ ಬಿಹಾರಿಯಂತಹ ಸರ್ವಶ್ರೇಷ್ಠ ಪ್ರಧಾನಿಯನ್ನು ಮಾತ್ರ ಕಂಡಿಲ್ಲ ಎಂದು ಹೇಳಿದ್ದಾರೆ. 

ಅಹಮದಾಬಾದಿನಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಆಡ್ವಾಣಿ ಪ್ರಧಾನಿಯಾಗಿ ನರೇಂದ್ರ ಮೋದಿ ತೋರಿಸುತ್ತಿರುವ ಸಾಮರ್ಥ್ಯದ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. ನರೇಂದ್ರ ಭಾಯಿಯವರು  ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಇಡೀ ದೇಶದ ಮೆಚ್ಚುಗೆ ಗಳಿಸಿದ್ದಾರೆ ಎಂಬುದನ್ನು ನಾನು ಅಭಿಮಾನ ಪೂರ್ವಕವಾಗಿ ಹೇಳುತ್ತೇನೆ ಎಂದರು.
 
"ಪ್ರಧಾನ ಮಂತ್ರಿಯಾಗಿ,ಪರಿಣಾಮಕಾರಿಯಾಗಿ ದೇಶವನ್ನು ಆಳ್ವಿಕೆ ನಡೆಸುವ ಸಾಮರ್ಥ್ಯವಷ್ಟೇ ಸಾಕಾಗುವುದಿಲ್ಲ.ಇತರ ರಾಷ್ಟ್ರಗಳೊಂದಿಗೆ ಸೌಹಾರ್ದ ಸಂಬಂಧಗಳನ್ನು ಸ್ಥಾಪಿಸುವ ಅಗತ್ಯವಿರುತ್ತದೆ. ಚುನಾವಣೆಯಲ್ಲಿ ಜನರ ವಿಶ್ವಾಸವನ್ನು ಗೆದ್ದ ಮೋದಿಯವರು ಈಗ ಇಡೀ ವಿಶ್ವದ ವಿಶ್ವಾಸವನ್ನು ಗೆದ್ದಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. 
 
ನರೇಂದ್ರ ಮೋದಿ ಚುನಾವಣೆಯನ್ನು ಗೆದ್ದಾಗ ಮುಂದೇನಾಗುವುದು, ಇತರರೊಂದಿಗಿನ ಸಂಬಂಧಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬ ಪ್ರಶ್ನೆ  ಕಾಡುತ್ತಿತ್ತು. ಆದರೆ ಅವರು ತಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ಹೆಗಲಿಗೇರಿಸಿಕೊಂಡರು. ಅವರಷ್ಟೇ ಅಲ್ಲ, ಅವರು ಜವಾಬ್ದಾರಿಗಳನ್ನು ಹಂಚಿದ್ದ ಇತರರು ಕೂಡ ಅತ್ಯುತ್ತಮ ಕೆಲಸವನ್ನು ಮಾಡಿದ್ದಾರೆ. ಮೋದಿ ವಿಷಯದಲ್ಲಿ ನನಗೆ ತುಂಬಾ ಸಂತೋಷವಾಗಿದೆ 'ಎಂದು ಆಡ್ವಾಣಿ ಹೇಳಿದ್ದಾರೆ.
 
ಮೋದಿಯನ್ನವರು ಬಹಳವಾಗಿ ಕೊಂಡಾಡಿದರಾದರೂ ಭಾರತದ ಇತಿಹಾಸದಲ್ಲಿ ವಾಜಪೇಯಿಯಂತಹ ಪ್ರಧಾನಿಯನ್ನು ನಾವು ಕಂಡಿಲ್ಲ. ವಾಜಪೇಯಿಯವರು ಪಡೆದ ಗೌರವ ನಮ್ಮ ಕಲ್ಪನೆಗೆ ನಿಲುಕದ್ದಲ್ಲ ಎಂದ ಅವರು ಏನೇ ಆದರೂ ಮೋದಿ ವಾಜಪೇಯಿಯವರಿಗೆ ಸರಿಸಾಟಿಯಲ್ಲ ಎಂದು ಪರೋಕ್ಷವಾಗಿ ತಿಳಿಸಿದರು.
 
ಬಿಜೆಪಿ ಪ್ರಚಾರ ಸಮಿತಿಯ ಮುಖ್ಯಸ್ಥರಾಗಿ ಮೋದಿಯನ್ನು ನಿಯೋಜಿದ್ದನ್ನು ಮತ್ತು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಅವರನ್ನು ಘೋಷಿಸಿದ್ದನ್ನು ಆಡ್ವಾಣಿ ವಿರೋಧಿಸಿದ್ದರು. ಆದರೆ ನಂತರ ಅನೇಕ ಸಂದರ್ಭಗಳಲ್ಲಿ ಅವರು ಮೋದಿಯನ್ನು ಪ್ರಶಂಸಿದ್ದರು. 
 
 ಪಕ್ಷದ ಕಾರ್ಯಕರ್ತರು ಬಿಜೆಪಿ ಮತ್ತು ಆರೆಸ್ಸೆಸ್ ನ ಇತಿಹಾಸದ ಅರಿವನ್ನು ಹೊಂದಿರಬೇಕು ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ, ನಾನಾಜೀ ದೇಶ್‌ಮುಖ್, ಕುಶಬಾಹು ಠಾಕ್ರೆಯಂತಹ ನಾಯಕರ ಕೊಡುಗೆ ಮರೆಯಬಾರದು ಎಂದು ಆಡ್ವಾಣಿ ಸಲಹೆ ನೀಡಿದರು. 

ವೆಬ್ದುನಿಯಾವನ್ನು ಓದಿ