ಪರೀಕ್ಷಾ ಭಯಕ್ಕೆ ಸಿಲುಕಿದ್ದ 8 ವರ್ಷದ ಬಾಲಕಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜ್ಕೋಟ್ನಲ್ಲಿ ಬೆಳಕಿಗೆ ಬಂದಿದೆ. ಬಾಲಕಿ ಮೂರನೇ ತರಗತಿಯಲ್ಲಿ ಓದುತ್ತಿದ್ದಳು.
ಭಾವತಿಪುರ ನಿವಾಸಿಯಾಗಿರುವ ಮನಸುಖ್ ಭಾಯಿ ಮತ್ತು ಭಾವ್ನಾಬೆನ್ ದಂಪತಿಗಳ ಮೂವರು ಮಕ್ಕಳಲ್ಲಿ ಕಿರಿಯಳಾಗಿರುವ ಹೀರಲ್ ಈ ಕೆಟ್ಟ ನಿರ್ಧಾರ ಕೈಗೊಂಡ ಬಾಲಕಿಯಾಗಿದ್ದಾಳೆ. ಆಕೆಯ ತಂದೆ-ತಾಯಿಗಳು ಕೂಲಿ ಕಾರ್ಮಿಕರಾಗಿದ್ದಾರೆ. ಹೀರಲ್ ಪರೀಕ್ಷೆ ಸಮೀಪಿಸುತ್ತಿರುವುದರಿಂದ ಭಯಗೊಂಡಿದ್ದಳು ಎಂದು ತಿಳಿದು ಬಂದಿದೆ.
ಮಂಗಳವಾರ ಬೆಳಿಗ್ಗೆ ದಂಪತಿಗಳಿಬ್ಬರು ಕೆಲಸಕ್ಕೆ ಹೋದಾಗ ಬಾಲಕಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಮಧ್ಯಾಹ್ನ ಆಕೆಯ ತಾಯಿ ಮನೆಗೆ ಬಂದಾಗ ಬಾಲಕಿ ಅತಿ ಗಂಭೀರ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಆಕೆಯನ್ನು ಅಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ "ಅಪ್ಪ ನಾನು ಶಾಲೆಗೆ ಹೋಗುವುದಿಲ್ಲ, ನನಗೇನೂ ಬರುವುದಿಲ್ಲ", ಎಂದು ಬಾಲಕಿ ಪದೇ ಪದೇ ಹಲುಬುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ದೇಹ ಸಂಪೂರ್ಣ ಸುಟ್ಟಿದ್ದರಿಂದ ಸಂಜೆ ಹೊತ್ತಿಗೆ ಕೊನೆಯುಸಿರೆಳೆದಿದ್ದಾಳೆ. ತಂದೆ-ತಾಯಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.