ಮೋದಿ ವಾಗ್ದಾಳಿ ಬಳಿಕ, ಸ್ವಾಮಿ ಕಾರ್ಯಕ್ರಮ ರದ್ದುಗೊಳಿಸಿದ ಮಹಾ ಬಿಜೆಪಿ

ಮಂಗಳವಾರ, 28 ಜೂನ್ 2016 (17:45 IST)
ತಮ್ಮ ಪಕ್ಷದ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಪ್ರಧಾನಿ ಮೋದಿ ಅವರು ಪರೋಕ್ಷ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಮಹಾರಾಷ್ಟ್ರ ಬಿಜೆಪಿ ಮುಂಬೈನಲ್ಲಿ ನಡೆಯಲಿದ್ದ ಸ್ವಾಮಿ ಅವರ ಕಾರ್ಯಕ್ರಮವೊಂದನ್ನು ರದ್ದುಗೊಳಿಸಿದೆ.

ಈ ಬೆಳವಣಿಗೆಯನ್ನು ದೃಢೀಕರಿಸಿರುವ ಮುಂಬೈ ಬಿಜೆಪಿ ಅಧ್ಯಕ್ಷ ಅಶೀಶ್ ಶೇಲಾರ್, ಕೆಲವು ತುರ್ತು ಕಾರಣಗಳಿಗಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.
 
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ರಘುರಾಮ್ ರಾಜನ್ ವಿರುದ್ಧ ಮತ್ತು ವಿತ್ತ ಸಚಿವಾಲಯದ ಉನ್ನತ ಅಧಿಕಾರಿಗಳ ವಿರುದ್ಧ ಸ್ವಾಮಿ ಅವರ ಟೀಕೆಗೆ ಪ್ರಧಾನಿ ಮೋದಿ ಸಹ ಅಸಮಾಧಾನ ವ್ಯಕ್ತಪಡಿಸಿದ್ದರು.
 
ಸ್ವಾಮಿ ಮಾಡಿರುವ ಆರೋಪಗಳಿಗೆ ನನ್ನ ಸಹಮತವಿಲ್ಲ.ಪ್ರಚಾರಕ್ಕಾಗಿ ಒಬ್ಬರ ಮೇಲೆ ಆರೋಪ ಹೊರಿಸುವುದು ಸರಿಯಲ್ಲ, ವ್ಯವಸ್ಥೆಗಿಂತಲೂ ದೊಡ್ಡವನು ಎಂದು ಯಾರಾದರೂ ತಿಳಿದುಕೊಂಡಿದ್ದರೆ, ಇದು ಅವರ ತಪ್ಪು ತಿಳುವಳಿಕೆ. ರಾಜನ್ ಒಬ್ಬ ದೇಶಭಕ್ತ ಎಂದು ಮೋದಿ ರಾಜನ್ ಕುರಿತಾದ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ