ರಾಜನಾಥ್ ಮೆಚ್ಚುಗೆಗೆ ಉಗ್ರನ ತಂದೆಯ ಧನ್ಯವಾದ

ಗುರುವಾರ, 9 ಮಾರ್ಚ್ 2017 (19:26 IST)
ತನ್ನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿರುವ ಕೇಂದ್ರ ಗೃಹ ಸಚಿವರಿಗೆ ಉಗ್ರ ಸೈಫುಲ್ಲಾ ತಂದೆ ಸರ್ತಾಜ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ  ಉತ್ತರ ಪ್ರದೇಶದಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಬಲಿಯಾದ ಸ್ವಯಂ ಘೋಷಿತ ಉಗ್ರ ಸೈಫುಲ್ಲಾ ತಂದೆ ಮಗನ ಶವವನ್ನು ಸ್ವೀಕರಿಸಲು ನಿರಾಕರಿಸಿದ ಬಗ್ಗೆ ಗೃಹ ಸಚಿವ ರಾಜನಾಥ್ ಸಿಂಗ್ ಇಂದು ಮುಂಜಾನೆ ಲೋಕಸಭೆಯಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಸೈಫುಲ್ಲಾನ ತಂದೆ ಸರ್ತಾಜ್ ಬಗ್ಗೆ ನಮಗೆ ಅನುಕಂಪವಿದೆ. ಜತೆಗೆ ಅವರ ಬಗ್ಗೆ ಸರ್ಕಾರಕ್ಕೆ ಹೆಮ್ಮೆ ಇದೆ. ಈ ವಿಷಯದಲ್ಲಿ ಸಂಪೂರ್ಣ ಲೋಕಸಭೆ ನನ್ನೊಂದಿಗೆ ಇದೆ ಎಂದು ಭಾವಿಸುತ್ತೇನೆ ಎಂದು ಅವರು ಹೇಳಿದ್ದರು.
 
ಎನ್‌ಕೌಂಟರ್‌ನಲ್ಲಿ ಹತನಾದ ಮಗನ ಶವ ಸ್ವೀಕರಿಸಲು ಒಪ್ಪದಿದ್ದ ಸರ್ತಾಜ್, ದೇಶದ್ರೋಹಿ ನಮ್ಮ ಮಗನಾಗಿರಲು ಸಾಧ್ಯವಿಲ್ಲ. ನಾವು ಭಾರತೀಯರು. ಇಲ್ಲಿಯೇ ಹುಟ್ಟಿ ಬೆಳೆದವರು. ನಮ್ಮ ಪೂರ್ವಜರು ಕೂಡ ಭಾರತೀಯರು. ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವ ನಮ್ಮ ಮಗನಾಗಿರಲು ಸಾಧ್ಯವಿಲ್ಲ.  ನಾವು ಈ ಮೃತದೇಹವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು  ಹೇಳಿದ್ದರು. ಅವರ ಈ ಆದರ್ಶಕ್ಕೆ ಸಿಂಗ್ ಅವರಿಂದ ಶ್ಲಾಘನೆ ವ್ಯಕ್ತವಾಗಿತ್ತು.
 
ಈ ಹಿನ್ನೆಲೆಯಲ್ಲಿ ಕಾನ್ಪುರದಲ್ಲಿ ಪ್ರತಿಕ್ರಿಯಿಸಿರುವ ಸರ್ತಾಜ್, ಸಿಂಗ್ ಅವರಿಗೆ ಧನ್ಯವಾದಗಳನ್ನರ್ಪಿಸಿದ್ದಾರೆ. 
 
ಸಿಂಗ್ ಮಾತು ಸಂಪೂರ್ಣ ದೇಶಕ್ಕೊಂದು ಸಂದೇಶ. ನಮ್ಮಂತಹ ಸಾಮಾನ್ಯ ಜನರು ದೇಶದ ಸಚಿವರಿಂದ ಗೌರವ ಪಡೆದುಕೊಳ್ಳುವಂತಾಗಿದೆ. ಅವರ ಈ ಮೆಚ್ಚುಗೆಗೆ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ.
 
ಲಖನೌ ಹೊರವಲಯದ ಮನೆಯೊಂದರಲ್ಲಿ ಅವಿತಿದ್ದ ಶಂಕಿತ ಉಗ್ರ ಸೈಫುಲ್ಲಾ (22) ನನ್ನು ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ಎಟಿಎಸ್ ಅಧಿಕಾರಿಗಳು ಬುಧವಾರ ಮುಂಜಾನೆ ಹೊಡೆದುರುಳಿಸಿದ್ದರು. ಆತನನ್ನು ಜೀವಂತವಾಗಿ ಸೆರೆ ಹಿಡಿಯಲು ಕಮಾಂಡೋಗಳು ಬಯಸಿದ್ದರು. ಆದರಾತ ಶರಣಾಗಲು ನಿರಾಕರಿಸಿದ್ದ. ಆತನ ಹತ್ಯೆ ಬಳಿಕ ಐಸಿಸ್ ಧ್ವಜ, ಅಪಾರ ಪ್ರಮಾಣದ ಶಸ್ತ್ರಾಸ್ತ್ರ. ರೈಲು ವೇಳಾಪಟ್ಟಿಯನ್ನು ವಶಪಡಿಸಿಕೊಳ್ಳಲಾಗಿತ್ತು.
 
ಆತ ಮತ್ತು ಆತನ ಗುಂಪಿನವರು ಐಸಿಸ್ ಉಗ್ರರೆಂದು ಸ್ವಯಂ ಘೋಷಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 
 
ಕಳೆದ ಎರಡು ತಿಂಗಳ ಹಿಂದೆ ಸೈಫುಲ್ಲಾ ತಂದೆ ಜತೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದ . ಆತ ಸೌಧಿಗೆ ಹೋಗ ಬಯಸಿದ್ದ ಮತ್ತು ಇದನ್ನು ತಂದೆ ಸರ್ತಾಜ್ ವಿರೋಧಿಸುತ್ತಿದ್ದರು. ಹೀಗಾಗಿ ಸದಾ ಅವರಲ್ಲಿ ವಾಗ್ವಾದ ನಡೆಯುತ್ತಿತ್ತು. ಮನೆ ಬಿಟ್ಟು ಹೋದ ಆತ ಸೌಧಿಗೆ ತೆರಳಲು ವೀಸಾ ಪಡೆಯಲೆಂದು ಮುಂಬೈಗೆ ಹೋಗಿದ್ದಾನೆ ಎಂದು ಪೋಷಕರು ನಂಬಿದ್ದರು.
 
ಮೂವರು ಸಹೋದರರಲ್ಲಿ ಕೊನೆಯವನಾದ ಸೈಫುಲ್ಲಾನನ್ನು ಬಂಧಿಸಲು ಎಟಿಎಸ್ ಕಾರ್ಯಾಚರಣೆ ಆರಂಭಿಸಿದ್ದ ಸಂದರ್ಭದಲ್ಲಿ ಆತನ ಹಿರಿಯಣ್ಣ ಖಾಲೀದ್ ಮೊಹಮ್ಮದ್ ಪೋನ್ ಕರೆ ಮಾಡಿ ಶರಣಾಗುವಂತೆ ತಮ್ಮನಲ್ಲಿ ಕೇಳಿಕೊಂಡಿದ್ದ. ಆದರೆ ನನಗೆ ಆ ಕಡೆಯಿಂದ ಮಾತುಗಳೇನು ಕೇಳಿ ಬರಲಿಲ್ಲ. ಒಂದು ಗಂಟೆಯವರೆಗೂ ಕೇವಲ ಗುಂಡಿನ ಮೊರೆತವೊಂದೇ ಕೇಳುತ್ತಿತ್ತು ಎನ್ನುತ್ತಾನೆ ಖಾಲೀದ್.
 
ಆತ ತಾನು ಹುತಾತ್ಮನಾಗುತ್ತೇನೆ ಎಂದು ಸಹೋದರನಲ್ಲಿ ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ