ಉಪಚುನಾವಣೆ ಭರ್ಜರಿ ಗೆಲುವು: ಓಮನ್ ಚಾಂಡಿಗೆ ರಾಹುಲ್ ಗಾಂಧಿ ಆಹ್ವಾನ
ಶುಕ್ರವಾರ, 3 ಜುಲೈ 2015 (20:37 IST)
ಅರುವಿಕ್ಕರಾ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಜಯಗಳಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಓಮನ್ ಚಾಂಡಿಯವರಿಗೆ ನವದೆಹಲಿಗೆ ಬರುವಂತೆ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಆಹ್ವಾನ ನೀಡಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪಕ್ಷ ಉಪಚುನಾವಣೆಯಲ್ಲಿ ಜಯಗಳಿಸಿದ್ದರಿಂದ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂತಸ ವ್ಯಕ್ತಪಡಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ದೊರೆತಿದೆ. ವಿಪಕ್ಷಗಳ ನಿಲುವು ಧೂಳಿಪಟವಾಗಿದೆ ಎಂದು ಮುಖ್ಯಮಂತ್ರಿ ಓಮನ್ ಚಾಂಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಕೇರಳ ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಸಬರಿನಂದನ್ ಅರುವಿಕ್ಕರಾ ಉಪಚುನಾವಣೆಯಲ್ಲಿ ಎದುರಾಳಿ ಸಿಪಿಐ)ಎಂ) ಅಭ್ಯರ್ಥಿ ಎಂ.ವಿಜಯ್ ಕುಮಾರ್ ವಿರುದ್ಧ 10128 ಮಂತಗಳ ಅಂತರದಿಂದ ಜಯಗಳಿಸಿದ್ದಾರೆ.
2016ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಕುರಿತಂತೆ ರಾಹುಲ್ ಗಾಂಧಿ ರಣತಂತ್ರ ರೂಪಿಸಿದ್ದಾರೆಯೇ ಎನ್ನುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಚಾಂಡಿ, ಅಂತಹ ಯಾವುದೇ ಚರ್ಚೆ ನಡೆಯಲಿಲ್ಲ ಎಂದರು.
ಕಳೆದ ಬಾರಿ ದೆಹಲಿಗೆ ಬಂದಾಗ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ನಾನು ಮತ್ತೊಂದು ಬಾರಿ ಪಕ್ಷದ ನಾಯಕರೊಂದಿಗೆ ಬಂದು ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ಮಾಜಿ ಸಭಾಪತಿ ಜಿ.ಕಾರ್ತಿಕೇಯನ್ ನಿಧನ ಹೊಂದಿದ್ದರಿಂದ ವಿಧಾನಸಭೆ ಕ್ಷೇತ್ರ ತೆರವಾಗಿತ್ತು. ಇದೀಗ ಕಾರ್ತಿಕೇಯನ್ ಪುತ್ರ ಸಬರಿನಂದನ್ ತಂದೆಯ ಸ್ಥಾನದಲ್ಲಿ ಶಾಸಕರಾಗಿ ಹೊರಹೊಮ್ಮಿದ್ದಾರೆ.