ಕಮಲ ಚಿನ್ಹೆಗೆ ದೊರೆತ ಬೆಂಬಲದಿಂದ ಇಟಲಿ, ಚಂಡೀಗಢ್‌‌ ತತ್ತರಿಸಬೇಕು: ಅಮಿತ್ ಶಾ

ಮಂಗಳವಾರ, 30 ಸೆಪ್ಟಂಬರ್ 2014 (15:07 IST)
ಹರಿಯಾಣ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ತತ್ಸಂಬಂಧ ತಮ್ಮ ಪಕ್ಷದ ಪರವಾಗಿ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಿ ಮಾತನಾಡುತ್ತಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಈ ಹಿಂದಿನ ಸರ್ಕಾರಗಳಿಂದ ರಾಜ್ಯದಲ್ಲಿ ಭೃಷ್ಟಾಚಾರ ಪ್ರವರ್ಧಮಾನಕ್ಕೆ ಬಂದಿದೆ ಎಂದು ಆರೋಪಿಸಿದ್ದು ಮತ್ತು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿಯನ್ನು ಬಹುಮತದಿಂದ ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದ್ದಾರೆ.

ಕಳೆದ 20 ವರ್ಷಗಳಿಂದ ಹೂಡಾ ಮತ್ತು ಚೌತಾಲಾ ಅವರಿಬ್ಬರೇ ರಾಜ್ಯವನ್ನು ಆಳುತ್ತಿದ್ದಾರೆ. ಒಬ್ಬರು ಅಧಿಕಾರಕ್ಕೇರಿದರೆ ಭೃಷ್ಟಾಚಾರ ಏಳಿಗೆ ಸಾಧಿಸುತ್ತದೆ. ಇನ್ನೊಬ್ಬರು ಬಂದರೆ ಗೂಂಡಾಗಿರಿ ಹೆಚ್ಚುತ್ತದೆ. ನೀವು ನಮ್ಮನ್ನು ಅಧಿಕಾರಕ್ಕೇರಿಸಿದರೆ ನಾವು ಭೃಷ್ಟಾಚಾರವನ್ನು ಮತ್ತು ಗೂಂಡಾಗಿರಿಯನ್ನು ಬುಡ ಸಮೇತ ಕಿತ್ತು ಹಾಕಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಶಾ ಭರವಸೆ ನೀಡಿದರು. 
 
ಜಾತಿ ಮತ್ತು ಪ್ರಾದೇಶಿಕತೆಯ ಆಧಾರದ ಮೇಲೆ ಮತದಾರರ ಮನವೊಲಿಸಲು ಪ್ರಯತ್ನಿಸುವವರನ್ನು ತಿರಸ್ಕರಿಸುವಂತೆ ಅವರು ಜನರಲ್ಲಿ ಆಗ್ರಹಿಸಿದರು.
 
ಜನರೊಂದಿಗೆ ಭಾವನಾತ್ಮಕ ಬೆಸುಗೆಯನ್ನು ಕಟ್ಟಲು ಪ್ರಯತ್ನಿಸಿದ ಶಾ ಈ ಹಿಂದೆ ಸುಮಾರು ಹತ್ತು ವರ್ಷಗಳ ಕಾಲ ಪಕ್ಷದ ಕಾರ್ಯಕರ್ತನಾಗಿ ಹರಿಯಾಣಾದಲ್ಲಿ ಕೆಲಸ ಮಾಡಿರುವ ನರೇಂದ್ರ ಮೋದಿ ಹರಿಯಾಣಾದ ಬಗ್ಗೆ ಬಹಳ ಚೆನ್ನಾಗಿ ಅರಿತುಕೊಂಡಿದ್ದಾರೆ ಎಂದು ಹೇಳಿದರು. 
 
ಚುನಾವಣೆಯಲ್ಲಿ ಬಿಜೆಪಿಯನ್ನು ವಿಜಯಿಯನ್ನಾಗಿಸಿ ಮತ್ತು ಅದಕ್ಕೆ ಮೋದಿ  ಯಾವ ರೀತಿಯಲ್ಲಿ ಪ್ರತಿಫಲವನ್ನು ನೀಡುತ್ತಾರೆ ಎಂಬುದನ್ನು ನೋಡಿರಿ " ಎಂದು ಶಾ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ