ಮಹಾರಾಷ್ಟ್ರ ಮತ್ತು ಹರಿಯಾಣಾ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಘನತೆ ಸಹ ದಿಢೀರನೆ ಎತ್ತರಕ್ಕೇರಿದ್ದು, ನರೇಂದ್ರ ಮೋದಿ ನಂತರ ಬಿಜೆಪಿಯ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ ಅವರು ಹೊರಹೊಮ್ಮಿದ್ದಾರೆ.
ಕಳೆದ ಬಾರಿ ಹರಿಯಾಣಾದಲ್ಲಿ 4 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದ ಬಿಜೆಪಿ, ಈ ಬಾರಿ ಫೀನಿಕ್ಸ್ನಂತೆ ಎದ್ದು ನಿಂತಿರುವುದರ ಹಿಂದೆ ಶಾ ತಂತ್ರಗಾರಿಕೆ ಕೆಲಸ ಮಾಡಿದೆ. ಮಹಾರಾಷ್ಟ್ರದಲ್ಲಿ ಒಬ್ಬಂಟಿಯಾಗಿ ಚುನಾವಣೆಯನ್ನೆದುರಿಸುವ ಸಮರ್ಪಕ ನಿರ್ಣಯದ ಹಿಂದೆಯೂ ಶಾರವರ ತಲೆ ಕೆಲಸ ಮಾಡಿದೆ.
ಎರಡು ರಾಜ್ಯಗಳಲ್ಲಿ ಕಮಲ ಅರಳಲು ಮೋದಿ- ಶಾ ಜೋಡಿಯ ಮೋಡಿಯೇ ಕಾರಣ ಎಂಬುದನ್ನು ರಾಜಕೀಯ ವಿಶ್ಲೇಷಕರು ಕೂಡ ಒಪ್ಪುತ್ತಿದ್ದಾರೆ. ಈ ಗೆಲುವು ಶಾರವರ ಜನಪ್ರಿಯತೆಯನ್ನು ಸಹ ಹೆಚ್ಚಿಸಿದ್ದು, ಅವರನ್ನೀಗ ದೇಶದ ಪ್ರಭಾವಿ ರಾಜಕಾರಣಿಗಳ ಸಾಲಲ್ಲಿ ಮೋದಿಯವರ ಬೆನ್ನಿಗೆ ತಂದು ನಿಲ್ಲಿಸಿದೆ.