ಜಯಲಲಿತಾ ವಿರುದ್ಧ ಕಣಕ್ಕಿಳಿಯುತ್ತಿದ್ದಾರೆ ಟ್ರಾಫಿಕ್ ರಾಮಸ್ವಾಮಿ

ಶುಕ್ರವಾರ, 29 ಮೇ 2015 (12:09 IST)
ಸಾಮಾಜಿಕ ಹೋರಾಟಗಾರ ಟ್ರಾಫಿಕ್ ರಾಮಸ್ವಾಮಿ (81) ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ  ಸ್ಪರ್ಧಿಸಲು ನಿರ್ಧರಿಸಿದ್ದಾರೆ. ರಾಧಕೃಷ್ಣ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೂನ್ 27ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಜಯಲಲಿತಾ ಸ್ಪರ್ಧಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ತಮ್ಮನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಘೋಷಿಸಿ ಎಂದು ರಾಮಸ್ವಾಮಿ ತಮಿಳುನಾಡಿನ ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. 
 
ಇಂದು ಡಿಎಂಕೆ ಪಕ್ಷದ ನಾಯಕ ಸ್ಟಾಲಿನ್ ಮತ್ತು ಡಿಎಂಡಿಕೆ ಪಕ್ಷದ ಮುಖಂಡ ಹಾಗೂ ನಟ ವಿಜಯಕಾಂತ್‍ರನ್ನು ಭೇಟಿ ಮಾಡಿ ತಮಗೆ ಬೆಂಬಲ ನೀಡುವಂತೆ ರಾಮಸ್ವಾಮಿ ಮನವಿ ಮಾಡಿಕೊಳ್ಳಲಿದ್ದಾರೆ. 
 
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ದದ ಆದಾಯ ಮೀರಿ ಆಸ್ತಿಗಳಿಸಿದ ಪ್ರಕರಣ ಸಂಬಂಧ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್ ಕ್ರಮವನ್ನು ಪ್ರಶ್ನಿಸಿ ಟ್ರಾಫಿಕ್ ರಾಮಸ್ವಾಮಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. 
 
ತಮಿಳುನಾಡಿನಲ್ಲಿ ಜನ ಪರವಾದ ತಮ್ಮ ನೈಜ ಕಳಕಳಿಯಿಂದ ಜನಪ್ರಿಯರಾಗಿರುವ ಸಾಮಾಜಿಕ ಹೋರಾಟಗಾರ ರಾಮಸ್ವಾಮಿ 
ಕೋರ್ಟಿನಲ್ಲಿ ತಮ್ಮ ವಾದವನ್ನು ತಾವೇ ಮಂಡಿಸುವಲ್ಲಿ ಸಿದ್ಧ ಹಸ್ತರು. 
 
ಚೆನ್ನೈ ನಗರದ ಟ್ರಾಫಿಕ್ ದುರವಸ್ಥೆಯಿಂದ ಬೇಸತ್ತು ಸ್ವಯಂ ಪ್ರೇರಣೆಯಿಂದ ಟ್ರಾಫಿಕ್ ನಿಯಂತ್ರಣಕ್ಕೆ ಕಾರಣರಾಗಿದ್ದಕ್ಕೆ ತಮಿಳುನಾಡು ಪೊಲೀಸ್ ಇಲಾಖೆಯಿಂದ ಗುರುತಿನ ಚೀಟಿ ಪಡೆದಿರುವ ಅವರು ರಾಜ್ಯಾದ್ಯಂತ ಟ್ರಾಫಿಕ್ ರಾಮಸ್ವಾಮಿ ಎಂದೇ ಪ್ರಸಿದ್ಧರಾಗಿದ್ದಾರೆ.
 
ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ ದೋಷಿ ಎಂದು ವಿಶೇಷ ನ್ಯಾಯಾಲಯ ತೀರ್ಪು ನೀಡಿದ ಕಾರಣ ಅವರು ಶಾಸಕಿ ಸ್ಥಾನವನ್ನು ಕಳೆದುಕೊಂಡಿದ್ದರು. ಆದರೆ ಕರ್ನಾಟಕ ಹೈಕೋರ್ಟ್ ಈ ಪ್ರಕರಣದಲ್ಲಿ ನಿರ್ದೋಶಿ ಎಂದು ತೀರ್ಪು ನೀಡಿದ್ದರಿಂದ ಜಯಲಲಿತಾ ಮತ್ತೆ ಮುಖ್ಯಮಂತ್ರಿಯಾಗಿದ್ದು, ಆರ್‌ಕೆ ನಗರ ಕ್ಷೇತ್ರದಿಂದ ಕಣಕಿಳಿಯುತ್ತಿದ್ದಾರೆ. 
 

ವೆಬ್ದುನಿಯಾವನ್ನು ಓದಿ