ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹೇಳಿಕೆಗಳನ್ನು ನೀಡುತ್ತ, ದಲಿತ ವಿರೋಧಿ ಮಾತುಗಳನ್ನು ಆಡಿದ್ದ ಯೋಗ ಗುರು ಬಾಬಾ ರಾಮದೇವ್ ಅವರಿಂದ, 1,000 ಕೋಟಿ ಪರಿಹಾರ ಕೋರಿ ಸರ್ಕಾರೇತರ ಸಂಸ್ಥೆಯೊಂದು ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದೆ.
ಕಳೆದ ತಿಂಗಳು ರಾಹಲ್ ಗಾಂಧಿ ಕುರಿತು ವ್ಯಂಗ್ಯವಾಡುತ್ತ ಬಾಬಾ "ಪಿಕನಿಕ್ ಮತ್ತು ಹನಿಮೂನ್ ಆಚರಿಸಲು ದಲಿತರ ಮನೆಗಳಿಗೆ ಹೋಗುತ್ತಾರೆ. ಅದರ ಬದಲು ದಲಿತ ಕನ್ಯೆಯ ಜತೆ ವಿವಾಹವಾದರೆ ಅವರ ಅದೃಷ್ಟ ಬದಲಾಗಿ ಅವರು ಪ್ರಧಾನಿಯಾಗಬಹುದು" ಎಂದು ಹೇಳಿದ್ದರು. ಅವರ ಈ ಮಾತಿಗೆ ಪ್ರತಿಕ್ರಿಯೆಯಾಗಿ ವ್ಯಾಪಕ ಖಂಡನೆ, ಧರಣಿಗಳು ನಡೆದಿದ್ದವು. ಆನಂತರ ತಮ್ಮ ಟಿಪ್ಪಣಿಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತ ಬಾಬಾ "ನನ್ನ ಮಾತಿಗೆ ತಪ್ಪು ಅರ್ಥ ಕಲ್ಪಿಸಲಾಗಿದೆ" ಎಂದು ಹೇಳಿದ್ದರು.