ನೇಪಾಳ ದುರಂತ: ಕೂದಲೆಳೆ ಅಂತರದಲ್ಲಿ ಪಾರಾದ ಬಾಬಾ ರಾಮದೇವ್

ಸೋಮವಾರ, 27 ಏಪ್ರಿಲ್ 2015 (12:57 IST)
ಯೋಗಶಿಬಿರವನ್ನು ನಡೆಸಿಕೊಡಲು ನೇಪಾಳಕ್ಕೆ ತೆರಳಿರುವ ಯೋಗಗುರು ಬಾಬಾ ರಾಮದೇವ್ ಶನಿವಾರ ನಡೆದ ವಿನಾಶಕಾರಿ ಭೂಕಂಪದಲ್ಲಿ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಜನರನ್ನು ಸಂಭೋಧಿಸಿ ಅವರು ವೇದಿಕೆಯಿಂದ ಕೆಳಗಿಳುತ್ತಿದ್ದಂತೆ ಅವರು ಕುಳಿತಿದ್ದ ವೇದಿಕೆ ಬಿದ್ದು ಹೋಯಿತು. 

ಬಹುಮಹಡಿ ಕಟ್ಟಡವೊಂದು ಧರೆಗುರುತ್ತಿರುವ ಮತ್ತು ಅದರಡಿ ಹಲವು ಜನರು ಸಿಲುಕುವ ಭೀಕರ ದೃಶ್ಯವನ್ನು ತಾವು ಪ್ರತ್ಯಕ್ಷವಾಗಿ ನೋಡಿದುದಾಗಿ ರಾಮದೇವ್ ಬಹಳ ದುಃಖದಿಂದ ಹೇಳಿಕೊಂಡರು ಎಂದು ಅವರ ಕಾರ್ಯಾಲಯದ ಪ್ರಕಟನೆ ತಿಳಿಸಿದೆ. 
 
24ರಿಂದ 29 ಎಪ್ರಿಲ್‌ವರೆಗೆ ಯೋಗಶಿಬಿರವನ್ನು ನಡೆಸಲು ಬಾಬಾ ಸಹಯೋಗಿ ಆಚಾರ್ಯ ಬಾಲಕೃಷ್ಣ ಜತೆ ನೇಪಾಳದ ರಾಜಧಾನಿಯಲ್ಲಿದ್ದಾರೆ. 
 
ನಾವು ಬಾಬಾ ರಾಮದೇವ್ ಅವರನ್ನು ಸಂಪರ್ಕಿಸಿದಾಗ ಸಂಕಷ್ಟದ ಈ  ಸಮಯದಲ್ಲಿ ತಾವು ನೇಪಾಳದಲ್ಲೇ ಇರುವುದಾಗಿ ಅವರು ಹೇಳಿದ್ದಾರೆ ಎಂದು ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟ್ ಮಾಡಿದ್ದಾರೆ. 
 
ತಾವು ಪ್ರಥಮ ಬಾರಿ ಪ್ರಕೃತಿ ವಿಕೋಪವನ್ನು ಕಂಡಿರುವುದಾಗಿ ಹೇಳಿರುವ ಬಾಬಾ ಇಂತಹ ಅಪಾಯದಲ್ಲಿ ಮುಂದೇನು ಮಾಡಬೇಕು ಎಂದು ತಕ್ಷಣಕ್ಕೆ ಹೊಳೆಯಲಿಲ್ಲ. ತುಂಡಿ ಕ್ರೀಡಾಂಗಣದಲ್ಲಿ ಯೋಗ ಶಿಬಿರವನ್ನು ಆಯೋಜಿಸಲಾಗಿತ್ತು. ಕಠ್ಮಂಡುವಿನ ಅತಿ ವಿಶಾಲ ತೆರೆದ ಪ್ರದೇಶವಾಗಿರುವ ಇಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ಬಂದು ಆಶ್ರಯ ಪಡೆದರು ಎಂದು ಹೇಳಿದ್ದಾರೆ.
 
ಈಗ ರಾಮದೇವ್ ಪೀಡಿತ ಜನರ ರಕ್ಷಣೆ, ಸೇವೆಗೆ ನಿಂತಿದ್ದೂ, ನೇಪಾಳಕ್ಕೆ ಅಗತ್ಯ ಸಹಾಯ ನೀಡಬೇಕಾಗಿ ಭಾರತ ಸರಕಾರ ಮತ್ತು ಪ್ರಧಾನಿ ಮೋದಿಯವರಿಗೂ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ