ಬಿಬಿಎಂಪಿ: ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ವಿರುದ್ಧ ಬಿಜೆಪಿ ಮುಖಂಡ ವಿ.ಸೋಮಣ್ಣ ವಾಗ್ದಾಳಿ

ಶುಕ್ರವಾರ, 28 ಆಗಸ್ಟ್ 2015 (15:24 IST)
ಬಿಬಿಎಂಪಿ ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರಣತಂತ್ರ ರೂಪಿಸುತ್ತಿವೆ ಎನ್ನುವ ವರದಿಗಳಿಂದ ಆಕ್ರೋಶಗೊಂಡಿರುವ ಬಿಜೆಪಿ ನಾಯಕ ವಿ.ಸೋಮಣ್ಣ, ಒಂದುವೇಳೆ ಮೈತ್ರಿ ವರದಿ ನಿಜವಾದಲ್ಲಿ ಎರಡೂ ಪಕ್ಷಗಳು ಇತಿಹಾಸದ ಪುಟದಲ್ಲಿ ಸೇರಲಿವೆ ಎಂದು ಹೇಳಿದ್ದಾರೆ.
 
ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ಮುಕ್ತ ರಾಜ್ಯವಾಗಿಸಬೇಕು ಎಂದು ಬಿಜೆಪಿ ಪ್ರಯತ್ನಿಸುತ್ತಿದೆ. ಒಂದು ವೇಳೆ ಬಿಬಿಎಂಪಿ ಅಧಿಕಾರದ ಗದ್ದುಗೆಗಾಗಿ ಮೈತ್ರಿ ಮಾಡಿಕೊಂಡಲ್ಲಿ ಎರಡು ಪಕ್ಷಗಳು ಸರ್ವನಾಶವಾಗಿ ಹೋಗಲಿವೆ ಎಂದರು.
 
ಬೆಂಗಳೂರು ನಗರದ ಜನತೆಯ ತೀರ್ಪನ್ನು ಗೌರವಿಸುವುದಾಗಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡರು ಹಿಂಬಾಗಿಲಿನ ಮೂಲಕ ಅಧಿಕಾರದ ಗದ್ದುಗೆ ಹಿಡಿಯಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿತನದ ಸಂಗತಿ ಎಂದರು.
 
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ಮಾಜಿ ಸಚಿವ ವಿ.ಸೋಮಣ್ಣ ಎಚ್ಚರಿಕೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ