ಯುವತಿಯನ್ನು ಅಪಹರಿಸುವಲ್ಲಿ ವಿಫಲವಾಗಿ ಪರಾರಿಯಾದ ಆರೋಪಿಗಳು

ಶನಿವಾರ, 13 ಫೆಬ್ರವರಿ 2016 (15:06 IST)
ಯುವತಿಯನ್ನು ಅಪಹರಿಸಿ ವಿವಾಹವಾಗುವ ಉದ್ದೇಶ ಹೊಂದಿದ್ದ ಆರೋಪಿಗಳು, ಯುವತಿಯ ಚಿಕ್ಕಪ್ಪನನ್ನು ಹತ್ಯೆ ಮಾಡಿ ತಂದೆಯನ್ನು ಗಂಭೀರವಾಗಿ ಗಾಯಗೊಳಿಸಿ ಪರಾರಿಯಾದ ಘಟನೆ ಪೀರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಾರಂಗಿ ಗ್ರಾಮದಲ್ಲಿ ನಡೆದಿದೆ.
 
ಆರೋಪಿಗಳು ಯುವತಿಯ ತಾಯಿ ಮತ್ತು ಚಿಕ್ಕಮನನ್ನು ಕೂಡಾ ಗಂಭೀರವಾಗಿ ಗಾಯಗೊಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಯುವತಿಯ ತಂದೆ ರಾಮ್‌ಬಾಬು ಅವರನ್ನು ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮುಂದಿನ 24 ಗಂಟೆಗಳು ಮಹತ್ವದ್ದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
 
ಆರೋಪಿ ಅಮರೇಶ್ ಠಾಕೂರ್ ತನ್ನ ಸಹೋದರ ಮತ್ತು ಆತನ ಪತ್ನಿಯೊಂದಿಗೆ ರಾತ್ರಿ 10 ಗಂಟೆಗೆ ಸುಮಾರಿಗೆ ಯುವತಿಯ ಮನೆಗೆ ಬಂದು ಯುವತಿಯನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. 
 
ನಾನು ನನ್ನ ತಾಯಿಯೊಂದಿಗೆ ರಾತ್ರಿ ಮಲಗಿದ್ದಾಗ ಆರೋಪಿ ಅಮರೇಶ್ ನನ್ನನ್ನು ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಇದನ್ನು ನೋಡಿದ ನನ್ನ ತಾಯಿ ನಗೀನಾ ದೇವಿ ಮತ್ತು ಚಿಕ್ಕಮ್ಮ ತುಳಸಿ ದೇವಿ ಆತನನ್ನು ತಡೆದಿದ್ದಾರೆ. ಈ ಸಂದರ್ಭದಲ್ಲಿ ನಾನು ಮನೆಯಿಂದ ಪರಾರಿಯಾಗಿ ಹೊರಗೊಡಿ ಬಂದಿದ್ದೇನೆ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.
 
ಆರೋಪಿಗಳು ನನ್ನ ತಂದೆ ಮತ್ತು ಚಿಕ್ಕಪ್ಪನನ್ನು ರಿವಾಲ್ವರ್‌ ತೋರಿಸಿ ಮನೆಯಿಂದ ಹೊರಗಡೆ ಕರೆದುಕೊಂಡು ಬಂದು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ, ರಕ್ತದ ಮಡುವಿನಲ್ಲಿ ಬಿದ್ದವರನ್ನು ನಂತರ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಯುವತಿ ಮಾಹಿತಿ ನೀಡಿದ್ದಾಳೆ.
 
ಪುತ್ರಿಯನ್ನು ಅವರಿಗೆ 24 ಗಂಟೆಯೊಳಗೆ ಒಪ್ಪಿಸಲು ವಿಫಲವಾದಲ್ಲಿ ನಮ್ಮನ್ನು ಕೂಡಾ ಹತ್ಯೆ ಮಾಡುವ ಬೆದರಿಕೆಯನ್ನು ಆರೋಪಿಗಳು ಹಾಕಿದ್ದಾರೆ ಎಂದು ಯುವತಿಯ ತಾಯಿ ನಗಿನಾ ದೇವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ವೆಬ್ದುನಿಯಾವನ್ನು ಓದಿ