ವೇದಿಕೆ ಕುಸಿದರೂ ಕೂದಲೆಳೆಯ ಅಂತರದಲ್ಲಿ ಪಾರಾದ ಲಾಲು ಪ್ರಸಾದ್ ಯಾದವ್

ಮಂಗಳವಾರ, 13 ಅಕ್ಟೋಬರ್ 2015 (19:25 IST)
ಬಿಹಾರ್‌ನ ಅರ್ವಾಳ್ ಜಿಲ್ಲೆಯ ಮಧುವನ್ ಮೈದಾನದಲ್ಲಿ ಚುನಾವಣೆ ಪ್ರಚಾರಕ್ಕಾಗಿ ಆಗಮಿಸಿದ್ದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ವೇದಿಕೆ ಕುಸಿದಿದ್ದರೂ ಗಾಯಗೊಳ್ಳದೇ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
 
ವೇದಿಕೆಯ ಮೇಲೆ ಅಗತ್ಯಕ್ಕಿಂತ ಹೆಚ್ಚಿನ ನಾಯಕರು ಮತ್ತು ಕಾರ್ಯಕರ್ತರು ಆಸೀನರಾಗಿದ್ದರಿಂದ ಭಾರ ತಾಳದೇ ವೇದಿಕೆ ಕುಸಿದಾಗ ವೇದಿಕೆಯ ಮೇಲಿದ್ದ ನಾಯಕರು ಕೆಳಗೆ ಬೀಳಬೇಕಾಗಿ ಬಂದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ವೇದಿಕೆಯ ಮೇಲಿದ್ದ ನಾಯಕರನ್ನು ಕೆಳಗಳಿಸಿದ್ದಲ್ಲದೇ ಅಲ್ಲಿದ್ದ ಭಾರವಾದ ಟೇಬಲ್‌ನ್ನು ಕೂಡಾ ತೆಗೆದುಹಾಕಿದ ನಂತರ ಲಾಲು ಚುನಾವಣೆ ಭಾಷಣ ಮಾಡಿದರು ಎನ್ನಲಾಗಿದೆ.
   
ಅರ್ವಾಳ್‌ನಲ್ಲಿ ಆರ್‌ಜೆಡಿ ಅಭ್ಯರ್ಥಿ ರವೀಂದ್ರ ಸಿಂಗ್ ಪರ ಚುನಾವಣೆ ಪ್ರಚಾರಕ್ಕಾಗಿ ಲಾಲು ಯಾದವ್ ಆಗಮಿಸಿದ್ದಾಗ ಈ ಘಟನೆ ಸಂಭವಿಸಿದೆ.ಆದರೆ, ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸ್ ಅಧಿಕಾರಿ ಕನಯ್ಯ ಸಿಂಗ್ ತಿಳಿಸಿದ್ದಾರೆ.
 
ನಂತರ ಚುನಾವಣೆ ಭಾಷಣ ಮಾಡಿದ ಲಾಲು ಯಾದವ್, ನನ್ನಂತಹ ಉತ್ತಮ ವ್ಯಕ್ತಿಗೆ ಕೆಟ್ಟದಾಗುವುದಿಲ್ಲ. ಕೆಟ್ಟ ವ್ಯಕ್ತಿಗಳು ಮಾತ್ರ ಶಿಕ್ಷೆ ಅನುಭವಿಸುತ್ತಾರೆ ಎಂದು ಜೋಕ್ ಕಟ್ ಮಾಡಿದರು.
 
ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥರಾದ ಲಾಲು ಪ್ರಸಾದ್ ಯಾದವ್ ಪ್ರತಿನಿತ್ಯ 7 ರಿಂದ 8 ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು ಮತದಾರರು ಜನತಾ ಪರಿವಾರಕ್ಕೆ ಮತ ನೀಡುವಂತೆ ಕೋರುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ