ಬಿಜೆಪಿ ಸುಳ್ಳು, ವಂಚಕರ ಪಕ್ಷ ಯಾರೂ ಭರವಸೆ ಮಾಡೋಲ್ಲ: ರಾಜ್ ಠಾಕ್ರೆ

ಶನಿವಾರ, 10 ಅಕ್ಟೋಬರ್ 2015 (20:13 IST)
ಬಿಜೆಪಿ ಸುಳ್ಳುಗಾರರ, ವಂಚಕರ ಪಕ್ಷವಾಗಿದ್ದರಿಂದ ಜನತೆ ನಂಬುವಂತಹ ಸ್ಥಿತಿಯಲ್ಲಿಲ್ಲ ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಆರೋಪಿಸಿದ್ದಾರೆ.
 
ಕಲ್ಯಾಣ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಢ್ನವೀಸ್ ನಿಶ್ಚಿತಾರ್ಥ ಸಂದರ್ಭದಲ್ಲಿ ಸಿಹಿ ಹಂಚುವಂತೆ ಇದೀಗ ಪ್ಯಾಕೇಜ್ ಘೋಷಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
 
ಬಿಜೆಪಿ ಅಧಿಕಾರಕ್ಕೆ ಬಂದು ಒಂದು ವರ್ಷಕ್ಕಿಂತ ಹೆಚ್ಚಾಗಿದೆ. ಇದೀಗ ಬಿಜೆಪಿ ನಾಯಕರು ಪ್ಯಾಕೇಜ್ ಘೋಷಿಸುತ್ತಿದ್ದಾರೆ. ಕೇವಲ ಘೋಷಣೆ ಮಾಡುತ್ತಾ ಕಾಲ ಕಳೆಯುವ ಇಂತಹ ಪಕ್ಷದ ಮೇಲೆ ಜನತೆ ಯಾವ ರೀತಿ ಭರವಸೆಯಿಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಯಾವುದೇ ಜನಪರ ಕಾರ್ಯಗಳನ್ನು ಮಾಡದೆ ಮತ ಕೇಳಲು ಬರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗುವುದಿಲ್ಲವೇ? ಕಾಂಗ್ರೆಸ್ ಪಕ್ಷದ ನಾಯಕರು ಮಾಡಿದ್ದಕ್ಕಿಂತ ಹೆಚ್ಚಿನ ಅಧೋಗತಿಗೆ ಕಾರಣವಾಗಿದ್ದಾರೆ. ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಅಚ್ಚೇ ದಿನ್ ಬರಲಿವೆ ಎಂದು ಬಿಜೆಪಿ ಘೋಷಿಸಿತ್ತು. ಆದರೆ, ಯಾವುದರಲ್ಲೂ ಅಚ್ಚೇ ದಿನ್ ಕಾಣಿಸುತ್ತಿಲ್ಲ ಎಂದು ಲೇವಡಿ ಮಾಡಿದರು.
 
ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಬಿಜೆಪಿ ಮತ್ತು ಶಿವಸೇನೆ ಭ್ರಷ್ಟಾಚಾರಕ್ಕಾಗಿ ಮತ್ತೆ ಒಂದಾಗಿವೆ. ಇದೀಗ ಕಲ್ಯಾಣ ನಗರ ಸಭೆ ಚುನಾವಣೆಯಲ್ಲೂ ಪ್ರತ್ಯೇಕವಾಗಿ ಕಣಕ್ಕಿಳಿಯುತ್ತಿವೆ ಎಂದು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ