ಜಮ್ಮು ಸಂಪೂರ್ಣ ಬಂದ್: ಬಿಜೆಪಿ-ಎಸಿಸಿ ಕಾರ್ಯಕರ್ತರ ಮಧ್ಯ ಘರ್ಷಣೆ

ಶುಕ್ರವಾರ, 31 ಜುಲೈ 2015 (20:02 IST)
ರಾಜ್ಯದಲ್ಲಿ ಏಮ್ಸ್ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಏಮ್ಸ್ ಸಮನ್ವಯ ಸಮಿತಿ(ಎಸಿಸಿ) ನೀಡಿದ್ದ ಬಂದ್ ಕರೆ, ಘರ್ಷಣೆಗೆ ತಿರುಗಿದ್ದು, ಏಮ್ಸ್ ಸ್ಥಾಪನೆಯ ಹೋರಾಟಗಾರರು ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು ಕೆಲ ಕಾಲ ಉದ್ರಿಕ್ತ ವಾತಾವಾರಣಕ್ಕೆ ಕಾರಣವಾಗಿದ್ದು ಪೊಲೀಸರು ಪರಿಸ್ಥಿತಿಯನ್ನು ಸಾಮಾನ್ಯ  ಸ್ಥಿತಿಗೆ ತರಲು ಹರಸಾಹಸ ಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.  
 
ಕೇಂದ್ರ ಸರಕಾರ ಏಮ್ಸ್ ಸ್ಥಾಪನೆಗೆ ಅಗತ್ಯವಾದ ಸೌಲಭ್ಯಗಳಿಲ್ಲ ಎಂದು ಮನವಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ, ಏಮ್ಸ್ ಸ್ಥಾಪಿಸುವಂತೆ ಒತ್ತಾಯಿಸಿ ಇಂದಿನಿಂದ ಮೂರು ದಿನಗಳವರೆಗೆ ಜಮ್ಮು ಬಂದ್‌ಗೆ ಎಸಿಸಿ ಕರೆ ನೀಡಿದೆ.  
 
ಎಸಿಸಿ ಕಾರ್ಯಕರ್ತರು ದ್ವಿಚಕ್ರ ವಾಹನದಲ್ಲಿ ಮೆರವಣಿಗೆ ನಡೆಸಿ ಕಾಚಿ ಚವಾನಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ.
 
ಎಸಿಸಿ ಕಾರ್ಯಕರ್ತರು ಬಿಜೆಪಿ ಮತ್ತು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದರಿಂದ ಕೇಂದ್ರ ಕಚೇರಿಯಲ್ಲಿದ್ದ ಬಿಜೆಪಿ ಕಾರ್ಯಕರ್ತರು ಎಸಿಸಿ ಮತ್ತು ಜಮ್ಮು ಬಾರ್ ಅಸೋಸಿಯೇಶನ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
 
ಕೆಲ ಕಾರ್ಯಕರ್ತರು ಪರಸ್ಪರರ ಮೇಲೆ ಕಲ್ಲು ತೂರಾಟ ನಡೆಸಿದಾಗ ಪೊಲೀಸರು ಮಧ್ಯಪ್ರವೇಶಿಸಿ ಟಿಯರ್ ಗ್ಯಾಸ್ ಮತ್ತು ಲಾಠಿ ಚಾರ್ಜ್ ಮೂ6ಲಕ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಪಾಂಡೆ ತಿಳಿಸಿದ್ದಾರೆ.
 
ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಬಂದ್ ಸಹಜವಾಗಿ ಮುಂದುವರಿದಿದೆ. ಕೆಲವೆಡೆ ಪ್ರತಿಭಟನಾ ಮೆರವಣಿಗೆಗಳು ನಡೆದಿವೆ, ಕಾರ್ಯಕರ್ತರು ಕೆಲ ಬಾಗಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸುತ್ತಿದ್ದಾರೆ ಎಂದು ಎಸ್‌ಪಿ ಪಾಂಡೆ ಮಾಹಿತಿ ನೀಡಿದ್ದಾರೆ.
 

ವೆಬ್ದುನಿಯಾವನ್ನು ಓದಿ