ಬಿಜೆಪಿ ನಾಯಕ ಸೇರಿದಂತೆ ಆರು ಜನರಿಂದ ಅಪ್ರಾಪ್ತೆಯ ಮೇಲೆ ಅತ್ಯಾಚಾರ
ಶನಿವಾರ, 23 ಆಗಸ್ಟ್ 2014 (17:24 IST)
ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಗಂಭೀರ ಆರೋಪದ ಮೇಲೆ ಬಿಜೆಪಿ ನಾಯಕ ಸೇರಿದಂತೆ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಆಸ್ಸಾಂ ಪೋಲಿಸ್ ಮೂಲಗಳು ತಿಳಿಸಿವೆ.
ಪ್ರತಿನಿತ್ಯದಂತೆ ಕಳೆದ ಶುಕ್ರವಾರ ಸಂಜೆ ಉಜ್ಜಯನಿ ರಸ್ತೆಯಲ್ಲಿ ಪರಿಶೀಲನೆ ನಡೆಸುತ್ತಿದ್ದ ಪೋಲಿಸರು ಸಂದೇಹಗೊಂಡು ಕಾರೊಂದನ್ನು ನಿಲ್ಲಿಸಿದಾಗ 15 ವರ್ಷದ ಬಾಲಕಿಯೊಬ್ಬಳು ನಾಲ್ಕುಜನ ಪುರುಷರ ವಶದಲ್ಲಿರುವುದು ಬೆಳಕಿಗೆ ಬಂತು ಎಂದು ಸಿಟಿ ಪೋಲಿಸ್ ಠಾಣಾಧಿಕಾರಿ ಭೂಪೇಂದ್ರ ಸಿಂಗ್ ಹೇಳಿದ್ದಾರೆ.
ಗೌಹಾತಿ ಸಮೀಪದ ಡೋಪಿಂಗ್ ಪ್ರದೇಶದ ವ್ಯಕ್ತಿಯೊಬ್ಬ ತನಗೆ ಕೆಲಸ ಕೊಡಿಸುವ ಸುಳ್ಳು ಭರವಸೆ ನೀಡಿ, ನಂಬಿಸಿ ಮುಂಬೈಗೆ ಕರೆ ತಂದ. ಆದರೆ ಅಲ್ಲಿ ಕೆಲವು ವ್ಯಕ್ತಿಗಳು ತನ್ನ ಮೇಲೆ ಅತ್ಯಾಚಾರ ಎಸಗಿದರು ಎಂದು ಅಪ್ರಾಪ್ತೆ ಪೋಲಿಸರಲ್ಲಿ ಹೇಳಿಕೆ ನೀಡಿದ್ದಾಳೆ.
ತದ ನಂತರ ಆಕೆಯನ್ನು ಮಧ್ಯ ಪ್ರದೇಶದ ಇಂದೋರ್ ನಗರಕ್ಕೆ ಕರೆ ತರಲಾಯಿತು. ಅಲ್ಲಿ ಮಧ್ಯವರ್ತಿ ರಾಜಾ ಅಲಿಯಾಸ್ ರಾಕೇಶ್ ಮಹಿಳಾ ಏಜೆಂಟ್ ಮಮ್ತಾಜ್ ಎನ್ನುವವಳಿಂದ ಹಣ ಪಡೆದು ಬಾಲಕಿಯನ್ನು ಮಾರಿದ.
ಮಮ್ತಾಜ್ ಪೀಡಿತ ಬಾಲಕಿಯನ್ನು 4,000 ರೂಪಾಯಿ ಮೊತ್ತಕ್ಕೆ ಉಜ್ಜಯನಿ ಮುನಿಸಿಪಲ್ ಕಾರ್ಪೊರೇಶನ್ ಕಂದಾಯ ಇನ್ಸ್ಪೆಕ್ಟರ್ ಸಬೀರ್ ಅಲಿಯಾಸ್ ಲಾಲ್, ಕಾರ್ಪೊರೇಶನ್ ಉದ್ಯೋಗಿ ರೋಹಿತ್ ಜಲೋಡಿಯಾ, ಬಿಜೆಪಿ ನಾಯಕ ಹಮೀದ್ ಸಾದರ್ ಮತ್ತು ಯಾಕುಬ್ ಶೇಕ್ ಎಂಬುವವರಿಗೆ ಮಾರಿದಳು.
ಕಳೆದ ಶುಕ್ರವಾರ ಆಕೆಯನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ಯುತ್ತಿದ್ದ ಕಾಮುಕ ಪಿಶಾಚಿಗಳು, ಕಾರಿನಲ್ಲಿಯೇ ಆಕೆಯನ್ನು ಶೋಷಿಸಲು ಪ್ರಾರಂಭಿಸಿದರು ಎಂದು ಸಿಂಗ್ ತಿಳಿಸಿದ್ದಾರೆ.
ನಿಗದಿ ಪಡಿಸಿದ ಸ್ಥಳವನ್ನು ತಲುಪುತ್ತಿದ್ದಂತೆ ಅವರಲ್ಲೇ ಕೆಲ ವಿವಾದ ಪ್ರಾರಂಭವಾಗಿ ಅವರು ಅಲ್ಲಿಂದ ಹಿಂತಿರುಗಲು ನಿರ್ಧರಿಸಿದರು.
ಹಿಂತಿರುಗುತ್ತಿದ್ದ ಸಮಯದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಸಬೀರ್, ತನ್ನ ಸಹಚರರ ಜತೆ ಪೋಲಿಸರ ಕೈಯಲ್ಲಿ ಸಿಕ್ಕಿಬಿದ್ದ.