ದಾದ್ರಿ ಹತ್ಯೆ ಸಣ್ಣ ಘಟನೆ ಎಂದ ಬಿಜೆಪಿ ಸಂಸದ ಸತ್ಯಪಾಲ್ ಸಿಂಗ್

ಮಂಗಳವಾರ, 13 ಅಕ್ಟೋಬರ್ 2015 (14:10 IST)
ದಾದ್ರಿ ಹತ್ಯೆಯೊಂದು ಸಣ್ಣ ಘಟನೆ ಎಂದು ಬಿಜೆಪಿ ಸಂಸದ ಸತ್ಯಪಾಲ್ ಸಿಂಗ್ ನೀಡಿದ ಹೇಳಿಕೆಗೆ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಇದು ಬಿಜೆಪಿಯ ನಿಜವಾದ ಮುಖವಾಡವನ್ನು ಬಯಲಿಗೆ ತಂದಿದೆ ಎಂದು ಕಿಡಿಕಾರಿವೆ.
 
ದಾದ್ರಿ ಹತ್ಯೆಯಂತಹ ಘಟನೆಗಳಿಗೆ ಕಡಿವಾಣ ಹಾಕಲು ಪ್ರಜಾಪ್ರಭುತ್ವದ ವಾತಾವರಣ ಸಂಪೂರ್ಣವಾಗಿ ಸಮರ್ಥವಾಗಿದೆ. ಇಂತಹ ಸಣ್ಣ ಘಟನೆಗಳನ್ನು ತಡೆಯುವ ಶಕ್ತಿ ಸರಕಾರಕ್ಕಿದೆ ಎಂದು ಸಿಂಗ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. 
 
ಬಾಘ್‌ಪತ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾದ ಸತ್ಯಪಾಲ್ ಸಿಂಗ್ ಮಾತನಾಡಿ, ಕೇಂದ್ರ ಸರಕಾರ ಮುಸ್ಲಿಮರ ಮತ್ತು ಇತರ ಧರ್ಮಗಳ ಅಭಿಪ್ರಾಯಗಳನ್ನು ಪಡೆಯಬೇಕಾಗಿದೆ ಎಂದರು. 
 
ಬಿಜೆಪಿ ಸಂಸದ ಸಿಂಗ್ ಹೇಳಿಕೆಯಿಂದ ಬಿಜೆಪಿ ಯಾವ ದಾರಿಯಲ್ಲಿ ಸಾಗುತ್ತಿದೆ ಎನ್ನುವುದರ ಸಂಕೇತವಾಗಿದೆ ಎಂದು ಕಾಂಗ್ರೆಸ್ ವಕ್ತಾರ ಅಜೋಯ್ ಕುಮಾರ್ ಗುಡುಗಿದ್ದಾರೆ.
 
ಮುಂಬೈ ಮಾಜಿ ಪೊಲೀಸ್ ಆಯುಕ್ತರಾಗಿದ್ದ ಬಿಜೆಪಿ ಸಂಸದ ಸಿಂಗ್ ಹೇಳಿಕೆ ನಾಚಿಕೆಗೇಡಿತನದ್ದು, ಇತರ ಸಮುದಾಯಗಳನ್ನು ತುಳಿದು ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.  

ವೆಬ್ದುನಿಯಾವನ್ನು ಓದಿ