ಅಸಹಿಷ್ಣುತೆ ವಿರೋಧಿಸಿ ದೇಶಾದ್ಯಂತ ಸಾಹಿತ್ಯ ಆಕಾಡೆಮಿ ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವ ಸಾಹಿತಿಗಳು, ಚಿತ್ರನಿರ್ಮಾಪಕರು ಹಣ ಪಡೆದು ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದ ರಾಮೇಶ್ವರ್ ತೇಲಿ ಹೇಳಿಕೆ ನೀಡಿ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ.
ದಿಬುರ್ಗಢ್ ಲೋಕಸಭಾ ಕ್ಷೇತ್ರದ ಸಂಸದರಾದ ರಾಮೇಶ್ವರ್ ತೇಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಸ್ಸಾಂ ರಾಜ್ಯದ ಖ್ಯಾತ ಸಾಹಿತಿ ಹೊಮೆನ್ ಬೊರ್ಗೊಹೈನ್ ಸೇರಿದಂತೆ ಪ್ರತಿಯೊಬ್ಬ ಸಾಹಿತಿಗಳು 10 ರಿಂದ 15 ಲಕ್ಷ ರೂ. ಹಣ ಪಡೆದು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರವನ್ನು ಅಪಮಾನ ಮಾಡಲು ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.