ತನ್ನ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಶಿವಸೇನೆ ಬಿಜೆಪಿ ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡಿದ್ದು ಬೇರ್ಪಟ್ಟು ಮತ್ತೆ ಒಂದಾಗಿರುವ ಪಕ್ಷಗಳ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಮಹಾರಾಷ್ಟ್ರ ಪ್ರಥಮ ಬಾರಿಗೆ ವಿದರ್ಭ ಮೂಲದ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರನ್ನು ಪಡೆದುಕೊಂಡಿದೆ. ಆದರೆ ವಿದರ್ಭದಲ್ಲಿ ರೈತರ ಆತ್ಮಹತ್ಯೆ ಈ ಹಿಂದಿನಂತೆ ಮುಂದುವರೆದಿದೆ ಎಂದು ಸಾಮ್ನಾದಲ್ಲಿ ಆರೋಪಿಸಲಾಗಿದೆ.
ಕಳೆದ ವಾರ ಸಹ ಬಿಜೆಪಿಯ ಮೇಲೆ ಪ್ರಹಾರ ನಡೆಸಿದ್ದ ಸೇನಾ ವರಿಷ್ಠ ಉದ್ಧವ್ ಠಾಕ್ರೆ ಸಂಸತ್ತಿನಲ್ಲಿ ಬಹುಮತಗಳಿಸಿರುವ ನಂತರವೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ಬಿಜೆಪಿ ಏಕೆ ಹಿಂಪಡೆದುಕೊಂಡಿಲ್ಲ ಎಂದು ಪ್ರಶ್ನಿಸಿದ್ದರು. ಜಮ್ಮು ಕಾಶ್ಮೀರಲ್ಲಿ ಸರಕಾರ ರಚಿಸುವ ಉದ್ದೇಶದಿಂದ ಮೈತ್ರಿಕೂಟ ರಚಿಸಿಕೊಳ್ಳಲು ಬಿಜೆಪಿ ಹೆಣಗಾಡುತ್ತಿದ್ದಾಗ ಅವರು ಈ ಮಾತುಗಳನ್ನಾಡಿದ್ದರು.