ಮೋದಿಯಿಂದ ತೆರವಾದ ವಡೋದರಾ ಕ್ಷೇತ್ರವನ್ನುಳಿಸಿಕೊಂಡ ಬಿಜೆಪಿ

ಮಂಗಳವಾರ, 16 ಸೆಪ್ಟಂಬರ್ 2014 (11:03 IST)
ಪ್ರಧಾನಿ ಮೋದಿಯಿಂದ ತೆರವಾಗಿದ್ದ ವಡೋದರಾ ಲೋಕಸಭಾ ಕ್ಷೇತ್ರದ ಮರು ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರತಿನಿಧಿತ್ವವನ್ನು ಉಳಿಸಿಕೊಂಡಿದ್ದು, ರಂಜನ್ ಬೆನ್ ಭಟ್ ಗೆಲುವನ್ನು ಸಾಧಿಸಿದ್ದಾರೆ.

ಪ್ರತಿಷ್ಠೆಯ ಕಣವಾಗಿದ್ದ ಕ್ಷೇತ್ರದಲ್ಲಿ  ಹತ್ತಿರದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ನರೇಂದ್ರ ರಾವತ್ ಅವರನ್ನು  1.83 ಲಕ್ಷ  ಮತಗಳ ಅಂತರದಿಂದ ಸೋಲಿಸಿ ರಂಜನ್ ಗೆಲುವನ್ನು ಪಡೆದಿದ್ದಾರೆ. 
 
ವಡೋದರಾದಲ್ಲಿ 45.30 ಪ್ರತಿಶತ ಮತದಾನ ದಾಖಲಾಗಿತ್ತು.
 
ಕಳೆದ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿ ಮತ್ತು ವಡೋದರಾದಿಂದ ಕಣಕ್ಕಿಳಿದಿದ್ದ ಮೋದಿ ಎರಡು ಕ್ಷೇತ್ರಗಳಲ್ಲಿ ಕೂಡ  ಭರ್ಜರಿ ಗೆಲುವನ್ನು ದಾಖಲಿಸಿದ್ದರು. ಆದರೆ ವಾರಣಾಸಿಯ ಪ್ರತಿನಿಧಿತ್ವವನ್ನು ಉಳಿಸಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದ ಮೋದಿಯವರು ವಡೋದರಾ ಸಂಸದನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. 
 
ಮೋದಿ 7 ಲಕ್ಷ ಮತಗಳ ಅಂತರದಿಂದ ಇಲ್ಲಿ ಗೆಲುವನ್ನು ಸಾಧಿಸಿದ್ದರು. 
 
ಪ್ರಧಾನಿ ಮೋದಿ ತವರಾದ ಗುಜರಾತಿನ ಒಂದು ಲೋಕಸಭಾ ಕ್ಷೇತ್ರ ಮತ್ತು 9 ವಿಧಾನಸಭಾ ಸ್ಥಾನಗಳಿಗೆ ಕಳೆದ ಸೆಪ್ಟಂಬರ್ 13 ರಂದು ಉಪ ಚುನಾವಣೆ ನಡೆದಿತ್ತು. 

ವೆಬ್ದುನಿಯಾವನ್ನು ಓದಿ