ವಿದೇಶಿ ಬ್ಯಾಂಕ್ಗಳಲ್ಲಿ ಕಪ್ಪು ಹಣ ಕೂಡಿಟ್ಟಿರುವ ಭಾರತೀಯರ ಹೆಸರುಗಳನ್ನು ಬಹಿರಂಗ ಪಡಿಸಲು ಯಾವುದೇ ಮುಲಾಜಿಲ್ಲ ಎಂದು ಹೇಳುವ ಮೂಲಕ ನರೇಂದ್ರ ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಕಪ್ಪು ಧನಿಕರ ಹೆಸರನ್ನು ನಾವು ಸುಪ್ರೀಂಕೋರ್ಟ್ನಲ್ಲಿ ಬಹಿರಂಗಗೊಳಿಸಿದ ದಿನ ಕಾಂಗ್ರೆಸ್ ನಾಯಕರು ಪೇಚಾಟಕ್ಕೆ ಸಿಲುಕಲಿದ್ದಾರೆ, ಹೊರತು ನಾವಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಲೋಕಸಭೆಯ ಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದ ಚುನಾವಣಾ ಪ್ರಣಾಳಿಕೆಯಲ್ಲಿ ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪುಹಣವನ್ನು ವಾಪಸ್ ತರುವುದಾಗಿ ಬಿಜೆಪಿ ಹೇಳಿಕೊಂಡಿತ್ತು. ಆದರೆ ಇತ್ತೀಚಿಗೆ ಸುಪ್ರೀಂ ಕೋರ್ಟ್ಗೆ ಕೊಟ್ಟ ಹೇಳಿಕೆಯಲ್ಲಿ, ಅವಳಿ ತೆರಿಗೆ ತಪ್ಪಿಸುವಿಕೆ ಒಪ್ಪಂದಗಳು ಕಪ್ಪು ಹಣದ ಕುರಿತು ಮುಂದಿನ ನಡೆಯನ್ನು ಇಡಲು ತೊಡಕಾಗಿದೆ ಎಂದು ಸರ್ಕಾರ ತಿಳಿಸಿತ್ತು.