ತೆಲಂಗಾಣದ ನಲ್ಗೊಂಡ ಜಿಲ್ಲೆಯ ಪೆಡ್ಡಪುರದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಬಾಲನನ್ನು ಮೇಲೆತ್ತುವಲ್ಲಿ ಯಶಸ್ವಿಯಾದರೂ, ಆತ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾನೆ. ಪುಲಿಚೆರ್ಲಾ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಮೃತಪಟ್ಟ ಬಾಲನನ್ನು ಮೂರುವರೆ ವರ್ಷದ ಶಿವ ಎಂದು ಗುರುತಿಸಲಾಗಿದೆ.
ಅಗ್ನಿಶಾಮಕ ಸಿಬ್ಬಂದಿಗಳ ನೇತೃತ್ವದಲ್ಲಿ ಸ್ಥಳೀಯ ಪೊಲೀಸರು ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬಾಲಕ ಶಿವನನ್ನು ಬೋರ್ವೆಲ್ನಿಂದ ಹೊರ ತೆಗೆಯುವಲ್ಲಿ ಸಫಲರಾಗಿದ್ದರು. ತೀವ್ರ ಅಸ್ವಸ್ಥನಾಗಿದ್ದ ಬಾಲಕನನ್ನು ನಾಗಾರ್ಜುನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ.
ತಂದೆ- ತಾಯಿಗಳ ಜತೆ ಹೊಲಕ್ಕೆ ಹೋಗಿದ್ದ ಬಾಲಕ ಅಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬೋರ್ವೆಲ್ಗೆ ಬಿದ್ದಿದ್ದಾನೆ. ಈ ತೆರೆದ ಕೊಳವೆ ಬಾವಿಯ ಮೇಲೆ ಚೀಲಗಳನ್ನಿಟ್ಟು ಮುಚ್ಚಲಾಗಿತ್ತು. ಆದರೂ ಬಾಲಕ ಜಾರಿ ಬಾವಿಯೊಳಕ್ಕೆ ಬಿದ್ದಿದ್ದಾನೆ.
ಮಾಹಿತಿ ಪಡೆದು ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು, ಮತ್ತು ಅಗ್ನಿಶಾಮಕ ಸಿಬ್ಬಂದಿ ಪುಟ್ಟ ಮಗುವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾದರಾದರೂ ಆತ ಬದುಕುಳಿಯಲಿಲ್ಲ.
ಮಗುವನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.