ನವದೆಹಲಿ: ದೆಹಲಿ ಮುಖ್ಯಮಂತ್ರಿ ಮತ್ತು ಲಿಫ್ಟಿನೆಂಟ್ ಗವರ್ನರ್ ನಡುವೆ ನಡೆಯುತ್ತಿರುವ ಜಂಗಿ ಕುಸ್ತಿ ತಾರಕಕ್ಕೇರಿದ್ದು, ಈ ಮಧ್ಯೆ ಜಂಗ್ ಅವರ ಬೆಂಬಲಕ್ಕೆ ನಿಂತಿರುವ ಕೇಂದ್ರ, ಉನ್ನತಾಧಿಕಾರಿಗಳನ್ನು ನೇಮಕ ಮಾಡುವಾಗ ಉಪ ರಾಜ್ಯಪಾಲರು ಮುಖ್ಯಮಂತ್ರಿಗಳ ಜತೆ ಚರ್ಚಿಸುವುದು ಕಡ್ಡಾಯವಲ್ಲ ಎಂದಿದೆ.
ಕೇಂದ್ರ ಗೃಹ ಸಚಿವಾಲಯ ಇಂದು ಈ ಕುರಿತು ಪ್ರಕಟನೆ ಹೊರಡಿಸಿದ್ದು , ಸಾರ್ವಜನಿಕ ದೃಷ್ಟಿ, ಪೊಲೀಸ್, ಭೂಮಿಗೆ ಸಂಬಂಧಿಸಿದಂತಹ ವಿಚಾರಗಳಲ್ಲಿ ಎಲ್ಜಿ ಸ್ವಂತ "ವಿವೇಚನೆ" ಬಳಸಿಕೊಂಡು ನಿರ್ಧಾರಕ್ಕೆ ಬರಬಹುದು. ಅಗತ್ಯವಿದ್ದಲ್ಲಿ ಮಾತ್ರ ಸಿಎಂ ಬಳಿ ಸಮಾಲೋಚಿಸಬಹುದೆಂದು ಈ ಪ್ರಕಟನೆಯಲ್ಲಿ ಹೇಳಲಾಗಿದೆ.
ಮಂಗಳವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೇಟಿಯಾದ ಈ ಇಬ್ಬರೂ ಪರಸ್ಪರರ ಮೇಲೆ ದೂರು ಸಲ್ಲಿಸಿದ್ದಾರೆ. ಸಂವಿಧಾನ ಉಲ್ಲಂಘಿಸಿ, ಅಧಿಕಾರ ವ್ಯಾಪ್ತಿಯನ್ನು ಮೀರಿ ವರ್ತಿಸಿದ್ದಾಗಿ ಜಂಗ್ ಹಾಗೂ ಕೇಜ್ರಿವಾಲ್ ಪರಸ್ಪರರ ವಿರುದ್ಧ ಆರೋಪ ಮಾಡಿದ್ದಾರೆ.