ರಾಜೀವ್ ಗಾಂಧಿ ಹಂತಕರ ಮುಕ್ತಿ ಪ್ರಸ್ತಾಪ ನಿರಾಕರಣೆ ವರದಿ ತಳ್ಳಿ ಹಾಕಿದ ಕೇಂದ್ರ

ಬುಧವಾರ, 20 ಏಪ್ರಿಲ್ 2016 (12:47 IST)
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಮಂದಿ ಅಪರಾಧಿಗಳನ್ನು ಬಿಡುಗಡೆಗೊಳಿಸುವಂತೆ ತಮಿಳುನಾಡು ಸರ್ಕಾರ ಮುಂದಿಟ್ಟಿದ್ದ ಪ್ರಸ್ತಾಪವನ್ನು ತಾವು ತಿರಸ್ಕರಿಸಿದ್ದೇವೆ ಎಂದು ಮಾಧ್ಯಮಗಳು ಪ್ರಕಟಿಸಿರುವ ಸುದ್ದಿಯನ್ನು ಕೇಂದ್ರ ಸರ್ಕಾರ ಬುಧವಾರ ಅಲ್ಲಗಳೆದಿದೆ. 

ತಮಿಳುನಾಡು ಸರ್ಕಾರದ ಪ್ರಸ್ತಾಪದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಕಾನೂನು ಸಚಿವಾಲಯದೊಂದಿಗೆ ಈ ಕುರಿತು ಸಮಾಲೋಚನೆ ನಡೆಯುತ್ತಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. 
 
ಮಾಜಿ ಪ್ರಧಾನಿಯವರ ಹಂತಕರಾದ ವಿ.ಶ್ರೀಹರನ್, ಎಜಿ. ಪೆರಾರಿವಾಲನ್, ಟಿ. ಸುತೇಂದ್ರರಾಜ ಅಲಿಯಾಸ್ ಸಂತಾನ್, ಜಯಕುಮಾರ್, ರಾಬರ್ಟ್ ಪಯಾಸ್, ರವಿಚಂದ್ರನ್ ಮತ್ತು ನಳಿನಿಯನ್ನು ಬಿಡುಗಡೆಗೊಳಿಸಲು ಕೋರಿ ತಮಿಳುನಾಡು ಸರ್ಕಾರ ಮುಂದಿಟ್ಟಿದ್ದ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದು ರಾಷ್ಟ್ರೀಯ ಸುದ್ದಿ ಪತ್ರಿಕೆಯೊಂದು ವರದಿ ಮಾಡಿತ್ತು.
 
ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದು ಇದೇ ಮೊದಲಲ್ಲ. 2104ರಲ್ಲಿ ಯುಪಿಎ ಸರ್ಕಾರವಿದ್ದಾಗ ಸಹ ತಮಿಳುನಾಡು ಸರ್ಕಾರ ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಪ್ರಸಾವವನ್ನು ಸಲ್ಲಿಸಿತ್ತು.
 
ಅಪರಾಧಿಗಳು ಈಗಾಗಲೇ 24 ವರ್ಷಗಳ ಕಾಲ ಶಿಕ್ಷೆಯನ್ನು ಮುಗಿಸಿರುವುದರಿಂದ ಅವರಿಗೆ ಕ್ಷಮಾದಾನ ನೀಡಿ ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ. 

ವೆಬ್ದುನಿಯಾವನ್ನು ಓದಿ