ಗುಪ್ತಚರ ದಳದಿಂದ ಮಾಹಿತಿ ಪಡೆದ ಗೃಹ ಸಚಿವಾಲಯ, ಕೆಲ ದಿನಗಳ ಹಿಂದೆ ಐವರು ಉಗ್ರರು ಭಾರತವನ್ನು ಪ್ರವೇಶಿಸಿದ್ದು, ದಾಳಿ ನಡೆಸುವ ಸಾಧ್ಯತೆಗಳಿರುವುದರಿಂದ ಎಲ್ಲಾ ರಾಜ್ಯಗಳು ಮಾರುಕಟ್ಟೆಗಳು, ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ವಹಿಸುವಂತೆ ಕೇಂದ್ರ ಸರಕಾರ ಸಲಹೆ ನೀಡಿದೆ.
ಮುಂಬರುವ ಹಬ್ಬಗಳಾದ ನವರಾತ್ರಿ, ದುರ್ಗಾಪೂಜೆ, ದಸರಾ, ದೀಪಾವಳಿ ಮತ್ತು ಮೊಹರಂ ಹಬ್ಬದ ಸಂದರ್ಭದಲ್ಲಿ ವಿಶೇಷವಾಗಿ ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರು ಮತ್ತು ಹೈದ್ರಾಬಾದ್ನಲ್ಲಿ ಭಾರಿ ಕಟ್ಟೆಚ್ಚರವಹಿಸುವಂತೆ ಗೃಹ ಸಚಿವಾಲಯ ರಾಜ್ಯಗಳಿಗೆ ಮಾಹಿತಿ ನೀಡಿದೆ.
ಮಸೀದಿ, ದರ್ಗಾ, ದೇವಾಲಯಗಳ ಹತ್ತಿರದಲ್ಲಿ ಕಿಡಿಗೇಡಿಗಳು ಘೋಷಣೆಗಳನ್ನು ಕೂಗದಂತೆ ಕಟ್ಟುನಿಟ್ಟಿನ ನಿಗಾವಹಿಸಬೇಕು. ಸಂಪ್ರದಾಯಕ ರಹಿತವಾಗಿ ಮೆರವಣಿಗೆ, ಒತ್ತಾಯಪೂರ್ವಕವಾಗಿ ದೇಣಿಗೆ ಸಂಗ್ರಹ, ಯುವತಿಯರನ್ನು ಚುಡಾಯಿಸುವುದು ಇತ್ಯಾದಿಗಳು ಕೋಮುಗಲಭೆಗೆ ಕಾರಣವಾಗಲಿರುವುದರಿಂದ ಅಂತಹ ಕೃತ್ಯಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ಕೇಂದ್ರದ ಗೃಹ ಸಚಿವಾಲಯ ರಾಜ್ಯಗಳ ಗೃಹ ಸಚಿವಾಲಯಗಳಿಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ.