ಮಾಜಿ ಟೆಲಿಕಾಂ ಸಚಿವ ಎ.ರಾಜಾ, ಡಿಎಂಕೆ ಎಂಪಿ ಕನ್ನಿಮೋಳಿ, ಕರುಣಾನಿಧಿ ಪತ್ನಿ ದಯಾಳು ಅಮ್ಮಲ್ ಮತ್ತಿತರರ ವಿರುದ್ಧ 2ಜಿ ತರಂಗಾಂತರ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ಕೋರ್ಟ್ ದೋಷಾರೋಪ ಹೊರಿಸಿದೆ. ಜಾರಿ ನಿರ್ದೇಶನಾಲಯವು 10 ವ್ಯಕ್ತಿಗಳು ಮತ್ತು 9 ಕಂಪನಿಗಳು ಸೇರಿದಂತೆ 19 ಆರೋಪಿಗಳ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಿತ್ತು.
ಜಾರಿ ನಿರ್ದೇಶನಾಲಯ ತನ್ನ ಆರೋಪಪಟ್ಟಿಯಲ್ಲಿ ಆರೋಪಿಗಳು 200 ಕೋಟಿ ರೂ. ಹಣಕಾಸು ಅವ್ಯವಹಾರದಲ್ಲಿ ಭಾಗಿಯಾಗಿದ್ದು, ಹಣದ ವಹಿವಾಟು ನೈಜತೆಯಿಂದ ಕೂಡಿಲ್ಲ. ಡಿಬಿ ಗ್ರೂಪ್ ಕಂಪೆನಿಗಳಿಗೆ ರಾಜಾ ಅವರು ಟೆಲಿಕಾಂ ಪರವಾನಗಿ ನೀಡಿದ್ದಕ್ಕಾಗಿ ಕೊಟ್ಟ ಲಂಚದ ಹಣವಾಗಿತ್ತು ಎಂದು ಆರೋಪಿಸಿದೆ.